ನವದೆಹಲಿ: ತಮ್ಮ ಮೇಲಿನ ಆರೋಪಗಳಿಗೆ ನಿಗದಿಯಾಗಿರುವ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ‘ವಿಚಾರಣೆ ಇಲ್ಲದೆ ಜೈಲುಗಳಲ್ಲಿಯೇ ಸವೆಸಿದ’ ಎಲ್ಲಾ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ನೇತೃತ್ವದ ನ್ಯಾಯಪೀಠ ನೀಡಿರುವ ಈ ಐತಿಹಾಸಿಕ ನಿರ್ದೇಶನವು ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಕುರಿಯನ್ ಜೋಸೆಫ್ ಹಾಗೂ ರೊಹಿಂಟನ್ ಎಫ್. ನಾರಿಮನ್ ಅವರು ಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಮೂರ್ತಿಗಳು. ಸದ್ಯ ದೇಶದ ಜೈಲುಗಳಲ್ಲಿ 3.81 ಲಕ್ಷ ಕೈದಿಗಳಿದ್ದು ಆ ಪೈಕಿ ವಿಚಾರಣಾಧೀನ ಕೈದಿಗಳ ಸಂಖ್ಯೆ 2.54 ಲಕ್ಷದಷ್ಟಿದೆ. ಅವರಲ್ಲಿ ಬಹುತೇಕರು ತಮ್ಮ ಮೇಲಿನ ಆರೋಪ ಸಾಬೀತಾದರೆ ಅನುಭವಿಸಬೇಕಾದ ಗರಿಷ್ಠ ಶಿಕ್ಷೆ ಅವಧಿಗಿಂತ ಹೆಚ್ಚಿನ ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ.
ದೇಶದ ಜೈಲುಗಳಲ್ಲಿನ ಶೇ 60ಕ್ಕೂ ಹೆಚ್ಚು ಕೈದಿಗಳು ವಿಚಾರಣಾಧೀನ ಕೈದಿಗಳು ಎಂಬುದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.
ತಾಕೀತು: ‘ಈ ಕೈದಿಗಳ ಬಿಡುಗಡೆಗಾಗಿ ಅಕ್ಟೋಬರ್ 1ರಿಂದ ಎರಡು ತಿಂಗಳು ವಾರಕ್ಕೊಮ್ಮೆ ಜೈಲಿಗೆ ಭೇಟಿ ನೀಡಿ ಅಲ್ಲಿಯೇ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಬಿಡುಗಡೆಗೆ ಅರ್ಹರಾದ ಕೈದಿಗಳಿಂದ ಜಾಮೀನು ಕೇಳಬಾರದು. ಸ್ವಂತ ಬಾಂಡ್ ಸಾಕು’ ಎಂದು ಅದು ಎಲ್ಲಾ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ಗಳು, ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ಗಳು (ಸಿಜೆಎಂಗಳು) ಮತ್ತು ಸೆಷನ್ಸ್ ನ್ಯಾಯಾಧೀಶರುಗಳಿಗೆ ತಾಕೀತು ಮಾಡಿತು.
ಗರಿಷ್ಠ ಶಿಕ್ಷೆಯ ಅರ್ಧ ಅವಧಿ ಪೂರ್ಣಗೊಳಿಸಿದ್ದರೂ ಇನ್ನೂ ವಿಚಾರಣೆಯನ್ನೇ ಕಾಣದಿರುವ ಕೈದಿಗಳನ್ನು ಗುರುತಿಸುವಂತೆ ಜೈಲುಗಳ ಅಧೀಕ್ಷಕರಿಗೆ ನ್ಯಾಯಪೀಠ ಸೂಚಿಸಿತು. ಈ ಮಾಹಿತಿಯನ್ನು ಆಯಾ ಹೈಕೋರ್ಟ್ಗಳಿಗೆ ನೀಡುವಂತೆ ಜೈಲು ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿತು.
ಕಾಯ್ದೆಯಲ್ಲಿ ಏನಿದೆ?: ನ್ಯಾಯಪೀಠವು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) 436 ಎ ಸೆಕ್ಷನ್ನ ಆಧಾರದಲ್ಲಿ ಈ ಆದೇಶ ಹೊರಡಿಸಿದೆ. ಯಾವುದೇ ವಿಚಾರಣಾಧೀನ ಕೈದಿ ತನ್ನ ಮೇಲಿನ ಆರೋಪಗಳಿಗೆ ನಿಗದಿಯಾಗಿರುವ ಗರಿಷ್ಠ ಶಿಕ್ಷೆ ಅವಧಿಯ ಅರ್ಧದಷ್ಟು ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದರೆ ಅಂತಹ ವ್ಯಕ್ತಿಯನ್ನು ಜಾಮೀನಿನ ಅಗತ್ಯವಿಲ್ಲದೆ ವೈಯಕ್ತಿಕ ಬಾಂಡ್ ಆಧಾರದ ಮೇಲೆಯೇ ಬಿಡುಗಡೆ ಮಾಡಬೇಕು ಎಂದು ಈ ನಿಯಮ ಹೇಳುತ್ತದೆ.
ಸ್ಥಳದಲ್ಲಿಯೇ ಆದೇಶ: ಪರಿಶೀಲನೆಗಾಗಿ ಜೈಲುಗಳಿಗೆ ತೆರಳುವ ನ್ಯಾಯಾಧೀಶರು ಅಪರಾಧ ದಂಡಸಂಹಿತೆ (ಸಿಆರ್ಪಿಸಿ) 436ಎ ಅಡಿ ಇಂತಹ ಕೈದಿಗಳ ಬಿಡುಗಡೆಗೆ ಸ್ಥಳದಲ್ಲಿಯೇ ಆದೇಶ ಹೊರಡಿಸಬಹುದಾಗಿದೆ. ಅವರನ್ನು ನ್ಯಾಯಾಲಯಗಳಿಗೆ ಕರೆ ತಂದು ವಿಚಾರಣೆ ನಡೆಸುವ ಅಗತ್ಯ ಇಲ್ಲ. ಈ ಸಂದರ್ಭದಲ್ಲಿ ವಕೀಲರ ಹಾಜರಾತಿಯೂ ಕಡ್ಡಾಯವಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿತು.
ಈ ಕಾರ್ಯ ಪೂರ್ಣವಾದ ಬಳಿಕ ನ್ಯಾಯಾಧೀಶರು ಆಯಾ ರಾಜ್ಯಗಳ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಬೇಕು. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗಳು ಈ ವರದಿಗಳನ್ನು ಸುಪ್ರೀಂ ಕೋರ್ಟ್ನ ಸೆಕ್ರೆಟರಿ ಜನರಲ್ಗೆ ಹಸ್ತಾಂತರಿಸಬೇಕು ಎಂದು ಸೂಚಿಸಿತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಕಾರ್ಯದಲ್ಲಿ ಮುತುವರ್ಜಿ ವಹಿಸಬೇಕು ಎಂದೂ ಪೀಠ ಸಲಹೆ ನೀಡಿ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿತು.
ಕೆಲವರಿಗಷ್ಟೆ ಅನುಕೂಲ
ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಿಂದ ರಾಜ್ಯದಲ್ಲಿ ಕೆಲವೇ ಕೈದಿಗಳಿಗೆ ಅನುಕೂಲ ಆಗಬಹುದು ಎಂದು ಬಂದಿಖಾನೆ ಇಲಾಖೆ ಮೂಲ ಗಳು ಹೇಳುತ್ತವೆ. ರಾಜ್ಯದ 102 ಕಾರಾಗೃಹಗಳಲ್ಲಿ ಸುಮಾರು 9,500 ವಿಚಾರಣಾಧೀನ ಕೈದಿಗಳಿದ್ದಾರೆ. ಈ ಪೈಕಿ ಒಂದಕ್ಕಿಂತ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಬಂದಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಲಾಭ ದೊರೆಯಲಿಕ್ಕಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.