ಹೈದರಾಬಾದ್ (ಪಿಟಿಐ): ವಿಭಜಿತ ಆಂಧ್ರ ಪ್ರದೇಶದ ಹೊಸ ರಾಜಧಾನಿಯನ್ನು ‘ವಿಜಯವಾಡ’ದ ಸುತ್ತಮುತ್ತ ಗುರುತಿಸಿ, ಅಭಿವೃದ್ಧಿಪಡಿಸಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಆಗ್ರಹಿಸಿದ್ದರಿಂದ ಉಂಟಾದ ಕೋಲಾಹಲ ಮಧ್ಯೆ ಅವರು ಈ ನಿರ್ಧಾರ ತಿಳಿಸುವ ಮೂಲಕ ಬಹುದಿನಗಳ ಕುತೂಹಲಕ್ಕೆ ತೆರೆ ಎಳೆದರು.
ರಾಜ್ಯ ಸಚಿವ ಸಂಪುಟವು ಸೆಪ್ಟೆಂಬರ್ 1ರಂದು ಸಭೆ ಸೇರಿ, ರಾಜ್ಯದ ಕೇಂದ್ರ ಸ್ಥಳವಾದ ವಿಜಯವಾಡದ ಸುತ್ತಮುತ್ತ ರಾಜಧಾನಿ ಗುರುತಿಸಲು ನಿರ್ಣಯ ಕೈಗೊಂಡಿದೆ. ಮೂರು ಬೃಹತ್ ನಗರಗಳು ಮತ್ತು 14 ಸುಂದರ ನಗರಗಳ ನಿರ್ಮಾಣದೊಂದಿಗೆ ರಾಜ್ಯವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ವಿಜಯವಾಡ–ಗುಂಟೂರು ಪ್ರದೇಶವನ್ನು ರಾಜಧಾನಿ ಮಾಡಬೇಕೆಂದು ಬಹುಜನರು ಕೇಂದ್ರ ಸರ್ಕಾರ ರಚಿಸಿದ ಶಿವರಾಮಕೃಷ್ಣನ್ ಸಮಿತಿಯ ಮುಂದೆ ಹೇಳಿದ್ದು, ಇದರಿಂದ ರಾಜ್ಯದ ಎಲ್ಲ ಭಾಗಗಳ ಜನರಿಗೂ ಸಮಾನ ಅವಕಾಶ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ತಿಳಿಸಿದರು.
ಚರ್ಚೆಗೆ ಆಗ್ರಹ: ವಿಧಾನಸಭೆಯಲ್ಲಿ ಮೊದಲು ಶಿವರಾಮಕೃಷ್ಣನ್ ಸಮಿತಿಯ ವರದಿಯನ್ನು ಮಂಡಿಸಿ, ಚರ್ಚಿಸಬೇಕೆಂದು ವೈಎಸ್ಆರ್ ಕಾಂಗ್ರೆಸ್ ಶಾಸಕರು ಒತ್ತಾಯಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ಅವರು ಸ್ಪೀಕರ್ ಪೀಠದ ಮುಂದೆ ತೆರಳಿ, ಫಲಕಗಳನ್ನು ಹಿಡಿದು ಪ್ರತಿಭಟಿಸಿದರು. ಚರ್ಚೆಗಾಗಿ ಘೋಷಣೆಗಳನ್ನು ಕೂಗಿದ್ದರಿಂದ ಎರಡು ಬಾರಿ ಸಭೆಯನ್ನು ಮುಂದೂಡಲಾಗಿತ್ತು.
ವೈಎಸ್ಆರ್ ಸ್ವಾಗತ: ಈ ಮಧ್ಯೆ, ವಿಜಯವಾಡದ ಸುತ್ತಮುತ್ತಲ ಪ್ರದೇಶವನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಆಂಧ್ರ ಸರ್ಕಾರದ ನಿರ್ಧಾರವನ್ನು ವೈಎಸ್ಆರ್ ಕಾಂಗ್ರೆಸ್ ಸ್ವಾಗತಿಸಿದೆ. ಆದರೆ ಶಿವರಾಮಕೃಷ್ಣನ್ ಸಮಿತಿಯ ವರದಿ ಬಗ್ಗೆ ಯಾವುದೇ ಚರ್ಚೆ ನಡೆಸದೆ ಈ ತೀರ್ಮಾನ ಕೈಗೊಂಡ ಬಗೆಯನ್ನು ಪಕ್ಷ ಖಂಡಿಸಿದೆ.
‘ಸರ್ಕಾರದ ನಿರ್ಧಾರಕ್ಕೆ ತಮ್ಮ ಪಕ್ಷದ ವಿರೋಧವಿಲ್ಲ. ಆದರೆ ಪ್ರಜಾಪ್ರಭುತ್ವ ಮಾದರಿಯಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ನಾವು ಬಯಸಿದ್ದೆವು’ ಎಂದು ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಐತಿಹಾಸಿಕ ವಿಜಯವಾಡ ವೈಭವ ಮತ್ತೆ ಆರಂಭ
ವಿಜಯವಾಡವನ್ನು ಆಂಧ್ರ ಪ್ರದೇಶದ ಹೊಸ ರಾಜಧಾನಿಯಾಗಿ ಘೋಷಿಸಿರುವುದರಿಂದ, ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾದ ಈ ಪ್ರಾಂತ್ಯ ಮತ್ತೆ ತನ್ನ ವೈಭವ ಮತ್ತು ಸರ್ವೋತ್ಕೃಷ್ಟತೆಯನ್ನು ಮೆರೆಯಲಿದೆ. ಕರಾವಳಿ ಆಂಧ್ರದ ಕೃಷ್ಣಾ ಜಿಲ್ಲೆ-ಯಲ್ಲಿರುವ ವಿಜಯವಾಡವು ತೆಲುಗು ಇತಿಹಾಸದಲ್ಲಿ ಸಾಂಪ್ರದಾಯಿಕವಾದ ಸರ್ವಶ್ರೇಷ್ಠತೆಯ ಸ್ಥಾನ ಹೊಂದಿದೆ. ದೇಶದ ಮೂರನೇ ಅತಿದೊಡ್ಡ ನದಿ ಕೃಷ್ಣಾದಿಂದಾಗಿ ಕೃಷ್ಣಾ ಜಿಲ್ಲೆ ಎಂಬ ಹೆಸರು ಬಂದಿದೆ. ಈ ಪವಿತ್ರ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಹುಟ್ಟಿ, ಜಿಲ್ಲೆಯ ಹಮ್ಸಲದೇವಿ ಗ್ರಾಮದ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತಿದೆ.
ಕೃಷ್ಣಾವನ್ನು ‘ತೆಲುಗು ಸಂಸ್ಕೃತಿಯ ಹೃದಯ’ ಎಂದು ಪರಿಗಣಿಸಲಾಗಿದ್ದು, ಕೃಷ್ಣಾ ಪ್ರಾಂತ್ಯದಲ್ಲಿ ಮಾತನಾಡುವ ತೆಲುಗು ಆಡುಭಾಷೆಯೇ ನೈಜ ಗುಣಮಟ್ಟದ ತೆಲುಗು ಭಾಷಾ ಉಚ್ಛಾರ ಎಂದು ಗುರುತಿಸಲಾಗಿದೆ. ವಾಣಿಜ್ಯ ಕೇಂದ್ರವೂ ಆದ ವಿಜಯವಾಡ ಪ್ರಾಂತ್ಯವು, ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಕೊಡುಗೆಯಾಗಿ ನೀಡಿದ್ದು, ಉದ್ಯಮಶೀಲತಾ ಪ್ರವೃತ್ತಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದೆ.
ರಾಜವಂಶಸ್ಥರ ತಾಣ: ವಿಜಯವಾಡದ ನೆರೆಯಲ್ಲಿರುವ ಗುಂಟೂರು ಜಿಲ್ಲೆಯ ‘ಧರಣಿಕೋಟಾ’ ಕ್ರಿ.ಪೂ. 3ನೇ ಶತಮಾನದ ಶಾತವಾಹನ ರಾಜವಂಶ ಸಂಸ್ಥಾಪಕ ಸಿಮುಖ ಅರಸನ ಪ್ರಥಮ ರಾಜಧಾನಿಯಾಗಿತ್ತು. ಅದೇ ರೀತಿ, ಇದೇ ಜಿಲ್ಲೆಯ ‘ನಾಗಾರ್ಜುನಕೊಂಡ’ವು ‘ಶ್ರೀಪರ್ವತ ಮತ್ತು ವಿಜಯಪುರಿ’ ಹೆಸರುಗಳಲ್ಲಿ ಇಕ್ಷ್ವಾಕು ಅರಸರ ರಾಜಧಾನಿ ಆಗಿತ್ತು. ಈ ರಾಜಮನೆತನದ ನಂತರ ಕೃಷ್ಣಾ ನದಿ ಉತ್ತರಕ್ಕಿರುವ ಆಂಧ್ರ ಪ್ರಾಂತ್ಯವನ್ನು ‘ಬೃಹತ್ಫಾಲಾಯನ ಗೋತ್ರಾ’ದ ಜಯವರ್ವ ಆಳಿದ್ದ.
ಪೂರ್ವ ಕರಾವಳಿಯನ್ನು ಆಳಿದ ಸಾಳಂಕಯನಾಸ್ ಅರಸರು ವಿಜಯವಾಡದಿಂದ 60 ಕಿ.ಮೀ. ದೂರದಲ್ಲಿರುವ ಎಲೂರು ಬಳಿಯ ವೆಂಗಿಯನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು. ಇವರ ನಂತರ ಆಳಿದ ವಿಷ್ಣುಕುಂಡಿನ್ಸ್ ಅರಸರು ಕೃಷ್ಣಾ ಮತ್ತು ಗೋದಾವರಿ ನಡುವಿನ ಭೂಪ್ರದೇಶವನ್ನು ವಶಪಡಿಸಿಕೊಂಡು, ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹವನ್ನೂ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.