ನವದೆಹಲಿ(ಪಿಟಿಐ): ಕಿಂಗ್ಫಿಷರ್ ಏರ್ಲೈನ್ಸ್ ಕಂಪೆನಿ ಮತ್ತು ಅದರ ಮಾಲೀಕ ವಿಜಯ್ ಮಲ್ಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಸೋಮವಾರ ಘೋಷಿಸಿದೆ.
ವಿಜಯ್ ಮಲ್ಯ ಮತ್ತು ಕಿಂಗ್ಫಿಷರ್ ಏರ್ಲೈನ್ಸ್ನ ಮೂವರು ನಿರ್ದೇಶಕರಾದ ರವಿ ನಿಡುಂಗಡಿ, ಅನಿಲ್ ಕುಮಾರ್ ಗಂಗೂಲಿ ಮತ್ತು ಸುಭಾಷ್ ಗುಪ್ತಾ ಅವರು ಬ್ಯಾಂಕ್ನ ಸಾಲವನ್ನು ಉದ್ದೇಶಪೂರ್ವಕವಾಗಿಯೇ ಮರುಪಾವತಿಸಿಲ್ಲ. ಹಾಗಾಗಿ ಅವರೆಲ್ಲರನ್ನೂ ಉದ್ದೇಶಪೂರ್ವಕ ಸುಸ್ತಿದಾರರು ಎಂದೇ ಪರಿಗಣಿಸಲಾಗಿದೆ ಎಂದು ಯುಬಿಐ ಕಾರ್ಯನಿರ್ವಾಹಕ ನಿರ್ದೇಶಕ ದೀಪರ್ ನಾರಂಗ್ ಸುದ್ದಿಗಾರರಿಗೆ ತಿಳಿಸಿದರು.
ಇದರಿಂದಾಗಿ ಈ ವ್ಯಕ್ತಿಗಳು ಭವಿಷ್ಯದಲ್ಲಿ ಬ್ಯಾಂಕಿನಿಂದ ಯಾವುದೇ ರೀತಿಯ ಸಾಲ ಪಡೆಯುವಂತಿಲ್ಲ. ಅಲ್ಲದೇ ಕಂಪೆನಿಯ ನಿರ್ದೇಶಕ ಹುದ್ದೆಯನ್ನೂ ಕಳೆದುಕೊಳ್ಳಲಿದ್ದಾರೆ. ಬ್ಯಾಂಕಿನ ದೂರು ಪರಿಹಾರ ಸಮಿತಿ (ಜಿಆರ್ಸಿ) ಕೈಗೊಂಡ ಈ ನಿರ್ಧಾರವನ್ನು ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಷೇರು ಪೇಟೆ ನಿಯಂತ್ರಣ ಸಂಸ್ಥೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ನಾರಂಗ್ ವಿವರಿಸಿದ್ದಾರೆ.