ಗೌರಿಬಿದನೂರು: ಐತಿಹಾಸಿಕ ಯಾತ್ರಾಸ್ಥಳ ವಿದುರಾಶ್ವತ್ಥದಲ್ಲಿ ಮಂಗಳವಾರ ಅಶ್ವತ್ಥನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ಜರುಗಿತು.
ರಥೋತ್ಸವದಲ್ಲಿ ಪಾಲ್ಗೊಳ್ಳಲು ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇಗುಲದ ಮುಂದೆ ಸಾಲುಗಟ್ಟಿ ನಿಂತು ಅಶ್ವತ್ಥನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದರು. ದೇಗುಲದಲ್ಲಿ ಜನ ಸಂದಣಿ ಇದ್ದ ಕಾರಣ ಕೆಲ ಭಕ್ತರು ದೇಗುಲದ ಆವರಣದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
ಸುತ್ತಮುತ್ತಲ ಗ್ರಾಮಗಳು ಹಾಗೂ ನೆರೆ ರಾಜ್ಯ ಆಂಧ್ರಪ್ರದೇಶದ ಹಿಂದೂಪುರ, ಪೆನಕೊಂಡ, ಅನಂತಪುರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಗಳಿಂದ ರಥವನ್ನು ಎಳೆದರು.
ಅಶ್ವತ್ಥನಾರಾಯಣಸ್ವಾಮಿ ಉತ್ಸವ ಮೂರ್ತಿಗಳನ್ನು ಸಂಪ್ರದಾಯದಂತೆ ಮಂಗಳ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ತಂದು ವಿಶೇಷವಾಗಿ ಹೂ ,ತಳಿರು ತೋರಣಗಳಿಂದ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಗಂಧೋತ್ಸವವನ್ನು ಅರ್ಪಿಸಲಾಯಿತು. ರಥ ಕದಲುತ್ತಿದಂತೆ ಭಕ್ತಾದಿಗಳು ದವನವನ್ನು ಸಿಕ್ಕಿಸಿದ ಬಾಳೆ ಹಣ್ಣನ್ನು ರಥದ ಮೇಲೆ ಎಸೆದರು. ಭಕ್ತರಿಗೆ ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿದುರಾಶ್ವತ್ಥದ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.
ಜಾತ್ರೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಶಿವಕುಮಾರ್, ಪುರ ಠಾಣೆ ಸಬ್ ಇನ್ಸ್ಪೆಕ್ಟರ್ ಬೈರ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಮಹೇಶ್ವರಿದೇವಿ ಬ್ರಹ್ಮರಥೋತ್ಸವ
ಗೌರಿಬಿದನೂರು: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಿಣಕನಗುರ್ಕಿ ಕ್ಷೇತ್ರ ಮಹೇಶ್ವರಿ ದೇವಿಯ ಬ್ರಹ್ಮರಥೋತ್ಸವ ಮಂಗಳವಾರ ನಡೆಯಿತು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಯಿತು.
ಮಂಗಳವಾರ ಸಂಜೆ 5ಕ್ಕೆ ಆರಂಭಗೊಂಡ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಹನುಮಪ್ಪ ರೆಡ್ಡಿ, ಮುಖಂಡರಾದ ಬಿ.ಎನ್.ಪ್ರಕಾಶ್ ರೆಡ್ಡಿ, ಜೆ.ಸುಬ್ಬರಾವ್, ಪ್ರಧಾನ ಅರ್ಚಕ ವೆಂಕಟರತ್ನಾಚಾರ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.