ಬೆಂಗಳೂರು: ವಿದೇಶಿ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕಮ್ಮನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಕಮ್ಮನಹಳ್ಳಿಯ ಸುನಿಲ್ (23) ಮತ್ತು ಕಿರಣ್ (20) ಬಂಧಿತರು. ಆರೋಪಿಗಳು ಪಾನಮತ್ತರಾಗಿ ಸ್ನೇಹಿತರ ಜತೆ ಸೇರಿ ಐವರಿ ಕೋಸ್ಟ್ ದೇಶದ ಅಮರ್ ಖಾಸೀಂ ಅಲಿಯ (24) ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದರು.
ಹೊರಮಾವು ಬಳಿ ವಾಸವಾಗಿರುವ ಅಮರ್, ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಾರೆ. ಅವರು ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಇಬ್ಬರು ಸ್ನೇಹಿತರೊಂದಿಗೆ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಅವರ ಬೈಕನ್ನು ಅಡ್ಡಗಟ್ಟಿ ಸಿಗರೇಟ್ ಕೊಡುವಂತೆ ವಾಗ್ವಾದ ನಡೆಸಿ ಜಗಳವಾಡಿದ್ದಾರೆ. ನಂತರ ಅಮರ್ ತಲೆಗೆ ಹೊಡೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಅಮರ್ ಅವರು ಠಾಣೆಗೆ ರಾತ್ರಿಯೇ ದೂರು ನೀಡಿದ್ದರು. ಆ ದೂರು ಆಧರಿಸಿ ಸುನಿಲ್ ಮತ್ತು ಕಿರಣ್ನನ್ನು ಬಂಧಿಸಲಾಗಿದೆ. ಅವರಿಬ್ಬರೂ ಬಿಪಿಓ ಕಂಪೆನಿಯ ಉದ್ಯೋಗಿಗಳಾಗಿದ್ದರು. ಅವರ ಸಹಚರರು ಪರಾರಿಯಾ ಗಿದ್ದಾರೆ. ಬಂಧಿತರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.