ಬೆಂಗಳೂರು: ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಹಣ್ಣು ವ್ಯಾಪಾರಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಮಾರೇನಹಳ್ಳಿಯ ಲೋಕೇಶ್, ಚಂದ್ರಾ ಲೇಔಟ್ನ ರಘು ಹಾಗೂ ಬ್ಯಾಡರಹಳ್ಳಿಯ ಮೋಹನ್ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು, ಗುರುವಾರ ರಾತ್ರಿ ಮಿಜೋರಾಂ ಮೂಲದ ಲಾಲ್ ಮಾಂಟುಯಾ (19) ಹಾಗೂ ಲಾಲ್ ಮಂಗೈಸಿಯಾ (19) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪಾಪರೆಡ್ಡಿ ಲೇಔಟ್ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ರಾತ್ರಿ 11ರ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಆ ಮಾರ್ಗ ನಿಂತಿದ್ದ ಆರೋಪಿಗಳು, ಕನ್ನಡ ಬರುವುದಿಲ್ಲ ಎಂದುಕೊಂಡು ಅವರನ್ನು ನಿಂದಿಸಿದ್ದಾರೆ. ಆದರೆ, ಸ್ವಲ್ಪ ಕನ್ನಡ ಬಲ್ಲವರಾದ ಮಂಗೈಸಿಯಾ ಜಗಳಕ್ಕೆ ಮುಂದಾಗಿದ್ದಾರೆ. ಈ ವೇಳೆ ವ್ಯಾಪಾರಿಗಳು, ಅವರನ್ನು ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ.
ನಂತರ ಪರಾರಿಯಾಗುವ ಯತ್ನದಲ್ಲಿದ್ದ ಅವರನ್ನು ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ– ಸಾವು: ಬಾಣಸವಾಡಿ ಪಂಚಮುಖಿ ಗಣೇಶ ದೇವಸ್ಥಾನದ ಬಳಿ ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಕೆ.ಜಾಯ್ (60) ಎಂಬುವರು ಮೃತಪಟ್ಟಿದ್ದಾರೆ.
ಚಿಕ್ಕ ಬಾಣಸವಾಡಿ ನಿವಾಸಿಯಾದ ಜಾಯ್, ಊಟ ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಪತ್ನಿ ಲಲಿತಾ ಜತೆ ವಾಯುವಿಹಾರ ಮಾಡುತ್ತಿದ್ದರು. ಮನೆಗೆ ವಾಪಸಾಗಲು ರಸ್ತೆ ದಾಟುತ್ತಿದ್ದ ಅವರಿಗೆ ಸೇವಾನಗರ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಲಲಿತಾ ಪತಿಯನ್ನು ಆಟೊದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು.
ನಂತರ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತಾದರೂ ಮಾರ್ಗ ಮಧ್ಯೆ ಜಾಯ್ ಕೊನೆಯುಸಿರೆಳೆದರು. ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ತಿಳಿಸಿದ್ದಾರೆ.