ತಿರುವನಂತಪುರ (ಪಿಟಿಐ): ‘ಐಸ್ ಬಕೆಟ್ ಚಾಲೆಂಜ್’ನಿಂದ ಸ್ಫೂರ್ತಿಗೊಂಡ ಕೇರಳದ ಶಾಲೆಯೊಂದರ ವಿದ್ಯಾರ್ಥಿನಿಯರು ಅದಕ್ಕೆ ಪರ್ಯಾಯವಾಗಿ ‘ರೈಸ್ ಬಕೆಟ್ ಚಾಲೆಂಜ್’ ಆಂದೋಲನವನ್ನು ಆರಂಭಿಸಿದ್ದಾರೆ.
ರಾಜ್ಯದ ಬುಡಕಟ್ಟು ಸಮುದಾಯಗಳಿಗೆ ನೆರವು ನೀಡುವ ಉದ್ದೇಶದಿಂದ ನಗರದ ‘ಕಾರ್ಮೆಲ್ ಗರ್ಲ್ಸ್ ಸೆಕೆಂಡರಿ ಸ್ಕೂಲ್‘ನ ವಿದ್ಯಾರ್ಥಿನಿಯರು ಈ ಆಂದೋಲನವನ್ನು ಆರಂಭಿಸಿದ್ದು, ಇದುವರೆಗೂ 1,500 ಕೆ.ಜಿ ಅಕ್ಕಿ, 220 ಕೆ.ಜಿ ಕಡಲೆ ಬೇಳೆ, 150 ಕೆ.ಜಿ ಬಟಾಣಿ ಸೇರಿದಂತೆ ಇನ್ನಿತರ ಗೃಹೋಪಯೋಗಿ ಸರಕುಗಳನ್ನು ಸಂಗ್ರಹಿಸಿದ್ದಾರೆ.
‘ಸಂಗ್ರಹಿಸಲಾಗಿರುವ ಆಹಾರ ಪದಾರ್ಥಗಳನ್ನು ಅಟ್ಟಾಪಾಡಿಯ ಪಾಲಕ್ಕಾಡ್, ಅಂಬೂರ್, ಕೊಟ್ಟೂರ್ ಸೇರಿದಂತೆ ಇತರ ಭಾಗಗಳಲ್ಲಿರುವ ಬುಡಕಟ್ಟು ಸಮುದಾಯಗಳ ಜನರಿಗೆ ವಿತರಿಸಲಾಗುವುದು. ವಿದ್ಯಾರ್ಥಿನಿಯರಲ್ಲಿ ಸಾಮಾಜಿಕ ಜವಾಬ್ದಾರಿ ಬಿತ್ತುವ ದೃಷ್ಟಿಯಿಂದ, ‘ಕುಟುಂಬಶ್ರೀ’ ಎಂಬ ಸಂಸ್ಥೆಯ ನೆರವಿನಿಂದ ‘ರೈಸ್ ಬಕೆಟ್ ಚಾಲೆಂಜ್’ ಆಂದೋಲನ ಆರಂಭಿಸಲಾಗಿದೆ’ ಎಂದು ಶಾಲೆಯ ಪಾಂಶುಪಾಲರಾದ ಸಿಸ್ಟರ್ ಹೆಲ್ಮ ತಿಳಿಸಿದ್ದಾರೆ.