ಬೆಂಗಳೂರು: ಕಲಾಸಿಪಾಳ್ಯ ಸಮೀಪದ ಮೋತಿನಗರದ ಸಾರ್ವಜನಿಕ ಶೌಚಾಲಯದಲ್ಲಿ ಶನಿವಾರ ವಿದ್ಯುತ್ ಪ್ರವಹಿಸಿ ಪ್ರಕಾಶ್ಕುಮಾರ್ (20) ಎಂಬುವರು ಮೃತಪಟ್ಟಿದ್ದಾರೆ. ರಾಜಸ್ತಾನ ಮೂಲದ ಅವರು ಮೋತಿನಗರದಲ್ಲಿನ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಂಗಡಿ ಸಮೀಪದ ಶೌಚಾಲಯದಲ್ಲಿ ಸಂಜೆ ಮೂತ್ರವಿಸರ್ಜನೆ ಮಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಶೌಚಾಲಯಕ್ಕೆ ಕಬ್ಬಿಣದ ಗೇಟ್ ಅಳವಡಿಸಿದ್ದು, ಆ ಗೇಟ್ನ ಪಕ್ಕದಲ್ಲೇ ವಿದ್ಯುತ್ ಕಂಬವಿದೆ. ಸಂಜೆ ಮಳೆ ಬಂದಿದ್ದರಿಂದ ಕಂಬದಲ್ಲಿ ಗ್ರೌಂಡಿಂಗ್ ಆಗಿ ಗೇಟ್ಗೆ ವಿದ್ಯುತ್ ಪ್ರವಹಿಸುತ್ತಿತ್ತು. ಅದೇ ವೇಳೆಗೆ ಶೌಚಾಲಯದ ಬಳಿ ಬಂದ ಪ್ರಕಾಶ್ಕುಮಾರ್, ಗೇಟ್ ಮುಟ್ಟುತ್ತಿದ್ದಂತೆ ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸರು, ಬೆಸ್ಕಾಂ ಹಾಗೂ ಶೌಚಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ಬಿಬಿಎಂಪಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.