ಬೆಂಗಳೂರು: ಏಪ್ರಿಲ್ 1ರಿಂದ ರಾಜ್ಯದಲ್ಲಿ ವಿದ್ಯುತ್ ತುಟ್ಟಿಯಾಗಲಿದೆ. ಪ್ರತಿ ಯೂನಿಟ್ ವಿದ್ಯುತ್ ದರವನ್ನು 10ರಿಂದ 20 ಪೈಸೆಯಷ್ಟು ಹೆಚ್ಚಿಸಲು ಎಸ್ಕಾಂಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅನುಮತಿ ನೀಡಿದೆ.
ಸರಾಸರಿ ಲೆಕ್ಕಾಚಾರದಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 13 ಪೈಸೆಯಷ್ಟು ಏರಿಕೆಯಾಗಲಿದೆ. ಪ್ರಸ್ತುತ ದರಕ್ಕೆ ಹೋಲಿಸಿದರೆ ಇದು ಶೇ 2ರಷ್ಟು ಹೆಚ್ಚಳ. ಕೆಇಆರ್ಸಿ ಅಧ್ಯಕ್ಷ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ಪ್ರಕಟಿಸಿದರು.
ಪ್ರತಿ ಯೂನಿಟ್ಗೆ 80 ಪೈಸೆಯಷ್ಟು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಕಳೆದ ಡಿಸೆಂಬರ್ 8ರಂದು ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ, ಆಯೋಗವು ಪ್ರತಿ ಯೂನಿಟ್ಗೆ ಸರಾಸರಿ 13 ಪೈಸೆಯಷ್ಟು ಮಾತ್ರ ದರ ಏರಿಸಲು ಅನುಮತಿ ನೀಡಿದೆ. ನೀರಾವರಿ ಪಂಪ್ಸೆಟ್ಗಳು ಮತ್ತು ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಗಳ ಫಲಾನುಭವಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.
100 ಯೂನಿಟ್ವರೆಗೆ ಏರಿಕೆ ಇಲ್ಲ: ಗೃಹ ಬಳಕೆಯ ಉದ್ದೇಶದ ವಿದ್ಯುತ್ ಸಂಪರ್ಕಗಳಲ್ಲಿ ಮೊದಲ 100 ಯೂನಿಟ್ ವಿದ್ಯುತ್ ಬಳಕೆಗೆ ದರ ಹೆಚ್ಚಳ ಮಾಡಲಾಗಿಲ್ಲ. 100 ಯೂನಿಟ್ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್ ದರವನ್ನು 15 ಪೈಸೆ ಹೆಚ್ಚಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆ ದರವನ್ನು ಪ್ರತಿ ಯೂನಿಟ್ಗೆ 15 ರಿಂದ 20 ಪೈಸೆಯಷ್ಟು ಏರಿಸಲಾಗಿದೆ.
ಅಲ್ಪಾವಧಿ ವಿದ್ಯುತ್ ಖರೀದಿ ದರ ಏರಿಕೆಯಿಲ್ಲ: ವಿದ್ಯುತ್ ಅಭಾವದ ಸಂದರ್ಭದಲ್ಲಿ ಎಸ್ಕಾಂಗಳು ಖರೀದಿಸುವ ಅಲ್ಪಾವಧಿ ಅಥವಾ
ಮಧ್ಯಾವಧಿ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ ₹ 4.50ರಂತೆ ಮುಂದುವರಿಸಲಾಗಿದೆ
ಎಲ್ಇಡಿ ಬಲ್ಬ್ಗೆ ಉತ್ತೇಜನ: ಕಡಿಮೆ ವಿದ್ಯುತ್ ಬಳಸುವ ಎಲ್ಇಡಿ ಬಲ್ಬ್ಗಳ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಕೆಇಆರ್ಸಿ ಹೊಸ ಪ್ರಸ್ತಾವ ಮುಂದಿಟ್ಟಿದೆ. ಸ್ಥಳೀಯ ಸಂಸ್ಥೆಗಳು ಬೀದಿ ದೀಪಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದರೆ ಅದು ಬಳಸುವ ಪ್ರತಿ ಯೂನಿಟ್ಗೆ ₹ 4 ದರವನ್ನು ಆಯೋಗ ನಿಗದಿ ಪಡಿಸಿದೆ.
ಸಹಾಯಧನಕ್ಕೆ ಷರತ್ತು: 10 ಎಚ್.ಪಿ ಸಾಮರ್ಥ್ಯದ 22.75 ಲಕ್ಷ ಕೃಷಿ ಪಂಪ್ಸೆಟ್ಗಳಿಗೆ ಹಾಗೂ 29 ಲಕ್ಷ ಭಾಗ್ಯಜ್ಯೋತಿ, ಕುಟೀರಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಸರಬರಾಜಿಗಾಗಿ ಸರ್ಕಾರ ನೀಡುವ ಸಹಾಯಧನವನ್ನು ಆಯೋಗವು 2015–16ನೇ ಸಾಲಿನಲ್ಲಿ ₹ 7,113 ಕೋಟಿಗೆ ಹೆಚ್ಚಿಸಿದೆ. ಪ್ರಸಕ್ತ ಸಾಲಿನಲ್ಲಿ ₹ 6,308 ಕೋಟಿ ನಿಗದಿಪಡಿಸಲಾಗಿತ್ತು.
ಮುಂದಿನ ವರ್ಷದಲ್ಲಿ ನೀರಾವರಿ ಪಂಪ್ಸೆಟ್ಗಳಿಗೆ 1752.2 ಕೋಟಿ ಯೂನಿಟ್ ಮತ್ತು ಭಾಗ್ಯಜ್ಯೋತಿ, ಕುಟೀರಜ್ಯೋತಿ ಉದ್ದೇಶಕ್ಕೆ 31.9 ಕೋಟಿ ಯೂನಿಟ್ ವಿದ್ಯುತ್ ಬೇಕಾಗ-ಬಹುದು ಎಂದು ಅಂದಾಜಿಸಲಾಗಿದೆ. ಈ ಸಹಾಯಧನ ಬಿಡುಗಡೆ ಮಾಡಲು ಕೂಡ ಆಯೋಗವು ಎರಡು ಪ್ರಮುಖ ಷರತ್ತುಗಳನ್ನು ಹಾಕಿದೆ.
ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 13 ಪೈಸೆಯಷ್ಟು ಹೆಚ್ಚಳವಾಗುವುದರಿಂದ ಎಸ್ಕಾಂಗಳಿಗೆ ಒಟ್ಟು ₹425 ಕೋಟಿ ಸಂಗ್ರಹವಾಗಲಿದೆ.
– ಎಂ.ಆರ್. ಶ್ರೀನಿವಾಸ ಮೂರ್ತಿ. ಕೆಇಆರ್ಸಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.