ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಮಕ್ಕಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ವಿದ್ಯುತ್ ಸಂಬಂಧಿ ಆಕಸ್ಮಿಕಗಳಿಗೆ ಪ್ರತಿವರ್ಷ ಬಲಿಯಾಗುವವರ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಸರಾಸರಿ ಪ್ರತಿದಿನವೂ ಒಂದು ಅಮೂಲ್ಯ ಜೀವ ವಿದ್ಯುದಾಘಾತಕ್ಕೆ ಸಿಲುಕುವ ಸ್ಥಿತಿ ನಮ್ಮದು.
ಕರ್ನಾಟಕದ ವಿದ್ಯುತ್ ವಿತರಣಾ ಕಂಪೆನಿಗಳು ತಮ್ಮ ಲೈನುಗಳನ್ನು ನಿರ್ವಹಿಸುವ ಬಗೆಯನ್ನು ಕಂಡವರಿಗೆ ಇದು ಆಶ್ಚರ್ಯ ಹುಟ್ಟಿಸುವಂಥದ್ದೇನೂ ಅಲ್ಲ. ನಿಬಿಡ ಜನವಸತಿ ಇರುವ, ಬಹು ಅಂತಸ್ತಿನ ಕಟ್ಟಡಗಳಿರುವ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಮತ್ತು ಅದರ ಜೊತೆ ಜೊತೆಯಲ್ಲೇ ಇರುವ ದೂರವಾಣಿ, ಕೇಬಲ್ ಟಿ.ವಿ.ಯ ಕೇಬಲ್ಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿವೆಯೇನೋ ಎಂಬಂತೆ ಕಾಣಿಸುತ್ತವೆ. ಇವು ಯಾರದ್ದಾದರೂ ಪ್ರಾಣಕ್ಕೆ ಎರವಾದಾಗ ಕೆಲದಿನಗಳ ಕಾಲ ಈ ಪರಿಸ್ಥಿತಿಯ ಸುಧಾರಣೆಯ ಕುರಿತಂತೆ ವಿದ್ಯುತ್ ಕಂಪೆನಿಗಳು ಮಾತನಾಡುತ್ತವೆ. ಮತ್ತೆ ಈ ವಿಷಯ ನೆನಪಾಗುವುದಕ್ಕೆ ಇನ್ನೊಂದು ಸಾವು ಸಂಭವಿಸಬೇಕು.
ಹೀಗೆ ಬಲಿಯಾಗುವವರು ಪ್ರತಿಷ್ಠಿತರಾಗಿದ್ದರೆ ಅವರ ಮನೆಗೆ ಮುಖ್ಯಮಂತ್ರಿಯೂ ಸಂದರ್ಶಿಸುವುದುಂಟು. ವಿಪ್ರೊ ಉದ್ಯೋಗಿಯೊಬ್ಬರ ಮಗು ವಿದ್ಯುತ್ ಸ್ಪರ್ಶಕ್ಕೆ ಬಲಿಯಾದಾಗ ಸಾಂತ್ವನ ಹೇಳುವುದಕ್ಕೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೇ ಹೋಗಿದ್ದರು. ಇಂಧನ ಖಾತೆಯನ್ನೂ ನಿರ್ವಹಿಸುತ್ತಿದ್ದ ಅವರು ವಿತರಣಾ ವ್ಯವಸ್ಥೆಯಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ಭರವಸೆ ನೀಡಿದ್ದರು. ಈ ಘಟನೆ ಸಂಭವಿಸಿದ ನಂತರ ಕರ್ನಾಟಕದಲ್ಲಿ ಐದು ಮಂದಿ ಮುಖ್ಯಮಂತ್ರಿಗಳು ಆಗಿ ಹೋಗಿ ಈಗ ಆರನೆಯವರು ಬಂದಿದ್ದಾರೆ. ಇಲ್ಲಿಯ ತನಕವೂ ವಿದ್ಯುತ್ ತಂತಿಗಳಿಗೆ ಬಲಿಯಾಗುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.
ಸಾರ್ವಜನಿಕ ಸುರಕ್ಷೆಗೆ ಸಂಬಂಧಿಸಿದಂತೆ ಆಡಳಿತ ನಡೆಸುವವರಿಂದ ಆರಂಭಿಸಿ ಆಳಿಸಿಕೊಳ್ಳುವವರ ತನಕ ಎಲ್ಲರೂ ನಿರ್ಲಕ್ಷ್ಯದ ಹಾದಿಯನ್ನು ತುಳಿಯುತ್ತಿರುವವರೇ. ಹೇಗಾದರೂ ಮಾಡಿ ವಿದ್ಯುತ್ ಪೂರೈಕೆ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು ಎಂಬ ನಿಲುವು ವಿದ್ಯುತ್ ಪೂರೈಕೆ ಕಂಪೆನಿಗಳದ್ದು. ಬಳಕೆದಾರರೂ ಅಷ್ಟೇ, ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕರೆ ಸಾಕು ಎಂಬ ನಿಲುವು ತಳೆದಿರುತ್ತಾರೆಯೇ ಹೊರತು ಅದು ಹೇಗೆ ತಮ್ಮ ಮನೆಯವರೆಗೂ ತಲುಪುತ್ತದೆ ಎಂಬುದರ ಕುರಿತು ಕಾಳಜಿ ವಹಿಸುವುದಿಲ್ಲ. ಮನೆ ನಿರ್ಮಾಣಕ್ಕೆ ಲೈಸೆನ್ಸ್ ನೀಡುವವರು ಸುರಕ್ಷೆಯನ್ನು ಲಂಚಕ್ಕೆ ಮಾರಿಕೊಂಡಿರುತ್ತಾರೆ.
ಲಂಚ ನೀಡುವವರಿಗೆ ತಾವು ಖರೀದಿಸುತ್ತಿರುವುದು ಅಪಾಯವನ್ನು ಎಂಬುದು ನೆನಪಿರುವುದಿಲ್ಲ. ವಿದ್ಯುತ್ ತಂತಿಗಳು ಹಾದು ಹೋಗುವ ಮಾರ್ಗದಲ್ಲಿರುವ ಮರವೊಂದರ ರೆಂಬೆಗಳನ್ನು ಕತ್ತರಿಸುವುದಕ್ಕೆ ಇರುವ ಕಾನೂನಿನ ತೊಂದರೆಗಳು ನೂರೆಂಟು. ಪರಿಣಾಮ ಬಾಲ್ಕನಿಯಲ್ಲಿ ನಿಂತರೆ, ಮರ ಹತ್ತಿದರೆ ವಿದ್ಯುತ್ ತಂತಿ ಕೈಗೆ ಸಿಗುವ ಸ್ಥಿತಿ ಉದ್ಭವಿಸುತ್ತದೆ. ಇದನ್ನು ಬದಲಾಯಿಸುವುದಕ್ಕೆ ಇರುವ ಏಕೈಕ ಮಾರ್ಗ ವಿದ್ಯುತ್ ವಿತರಣಾ ಕಂಪೆನಿಗಳನ್ನು ಬಳಕೆದಾರರೇ ಮುಂದಾಗಿ ಎಚ್ಚರಿಸುವುದು ಮಾತ್ರ.
ಬಹುಮಹಡಿಯ ವಸತಿ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಬದಲಿಗೆ ಭೂಗತ ಕೇಬಲ್ಗಳನ್ನು ಬಳಸಬೇಕು. ಮಕ್ಕಳನ್ನು ಮರ ಹತ್ತದಂತೆ ತಡೆಯುವುದಕ್ಕಿಂತ ಸುಲಭದ ಕೆಲಸ ವಿದ್ಯುತ್ ತಂತಿಗಳು ಮರಗಳನ್ನು ಸ್ಪರ್ಶಿಸದಂತೆ ನೋಡಿಕೊಳ್ಳುವುದು. ಈ ಬಗೆಯ ಸುಧಾರಣೆಗಳಿಂದ ವಿದ್ಯುತ್ ಸೋರಿಕೆಯೂ ಕಡಿಮೆಯಾಗುತ್ತದೆ. ಅಮಾಯಕರ ಪ್ರಾಣಗಳೂ ಉಳಿಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.