ವಿಜಾಪುರ ಜಿಲ್ಲೆ ಕೂಡಗಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡಿನಿಂದ ಇಬ್ಬರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಲಾಠಿ ಪ್ರಹಾರ ಹಾಗೂ ಕಲ್ಲುತೂರಾಟಗಳಲ್ಲಿ ಪೊಲೀಸರು ಸೇರಿದಂತೆ ಅನೇಕ ಮಂದಿ ಗಾಯಗೊಂಡಿರುವುದು ದುರದೃಷ್ಟಕರ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್ಟಿಪಿಸಿ), 4000 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ಸ್ಥಾವರ ಸ್ಥಾಪನೆಗಾಗಿ ಕೂಡಗಿಯಲ್ಲಿ ಈಗಾಗಲೇ ರೈತರ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದು ಕಾಮಗಾರಿಗಳೂ ಪ್ರಾರಂಭವಾಗಿವೆ. ಯೋಜನೆಯ ಪ್ರಕಾರ, ಮೊದಲ ಘಟಕ 2015ರ ಡಿಸೆಂಬರ್ನಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಬೇಕಾಗಿದೆ. ಇಂತಹ ಹೊತ್ತಿನಲ್ಲಿ ಈ ಪ್ರತಿಭಟನೆ ಶುರುವಾಗಿದೆ.
ಪ್ರತಿಭಟನೆಯ ಹಿಂದಿನ ಕಾರಣಗಳೇನು ಎಂಬುದನ್ನು ಸರ್ಕಾರ ಮೊದಲು ಅರಿತುಕೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗ ಹಾಗೂ ಹೆಚ್ಚಿನ ಪರಿಹಾರದ ಭರವಸೆಗಳನ್ನು ನೀಡಲಾಗಿದ್ದು ಈ ಭರವಸೆಗಳನ್ನು ಈಡೇರಿಸಬೇಕಾದುದು ಸರ್ಕಾರದ ಕರ್ತವ್ಯ. ಹಾರುಬೂದಿ ಮಾಲಿನ್ಯ, ಜನರ ಆರೋಗ್ಯ ಇತ್ಯಾದಿ ವಿಚಾರಗಳ ಬಗೆಗಿನ ಆತಂಕಗಳನ್ನು ನಿವಾರಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮುಂದುವರಿಸಲು ಗಮನ ಕೊಡಬೇಕಾದುದು ತುರ್ತು ಅಗತ್ಯ. ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಇದರ ಪರಿಹಾರಕ್ಕೆ ವಿದ್ಯುತ್ ಉತ್ಪಾದನಾ ಯೋಜನೆಗಳು ಅವಶ್ಯ ಎಂಬುದನ್ನು ನಾವು ಮನಗಾಣಬೇಕು.
ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಿಂದ ಇನ್ನು 20 ದಿನ ಮಾತ್ರ ಜಲ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಇಂಧನ ಸಚಿವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ರಾಜ್ಯದ ವಿದ್ಯುತ್ ಕೊರತೆ ನೀಗಲು ಜಲ ವಿದ್ಯುತ್ ಯೋಜನೆಗಳು ಸಾಕಾಗುವುದಿಲ್ಲ ಎಂಬುದು ಗೊತ್ತಿರುವ ಸಂಗತಿ. ಇನ್ನು ರಾಯಚೂರಿನಲ್ಲಿರುವ ಶಾಖೋತ್ಪನ್ನ ಘಟಕಗಳಲ್ಲಿ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಬರೀ ತತ್ಕಾಲದ ಉಪಶಮನ ಕ್ರಮಗಳನ್ನಷ್ಟೇ ಸರ್ಕಾರ ಅನುಸರಿಸುತ್ತಿದ್ದರೆ ಪ್ರಯೋಜನವಿಲ್ಲ. ಹೊಸ ವಿದ್ಯುತ್ ಯೋಜನೆಗಳು ಅಸ್ತಿತ್ವಕ್ಕೆ ಬರದಿದ್ದಲ್ಲಿ ರಾಜ್ಯದ ವಿದ್ಯುತ್ ಪರಿಸ್ಥಿತಿ ಶೋಚನೀಯವಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಬಗ್ಗೆಯೂ ನಿರ್ದಿಷ್ಟ ನಿಲುವು ತಳೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಅಪೇಕ್ಷೆ ಪಟ್ಟರೆ ಮಾತ್ರ ನಿಡ್ಡೋಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಆದರೆ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಒಮ್ಮತವಿಲ್ಲದಿರುವುದು ವಿಷಾದನೀಯ. ಕರಾವಳಿ ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಿದರೆ ನಿಡ್ಡೋಡಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಆರಂಭಿಸಲು ಅವಕಾಶವಿದೆ ಎಂಬಂತಹ ಇಂಧನ ಸಚಿವರ ಮಾತಿಗೆ, ದಕ್ಷಿಣ ಕನ್ನಡ ಜಿಲ್ಲೆಯವರಾದ ಸಚಿವ ಕೆ. ಅಭಯಚಂದ್ರ ಜೈನ್ ಕಳೆದ ವಾರವೂ ವಿಧಾನಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮುದ್ರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣವಾದಲ್ಲಿ ಕಲ್ಲಿದ್ದಲು ಸಾಗಣೆ ವೆಚ್ಚ ತಗ್ಗಿಸಬಹುದೆಂಬ ದೃಷ್ಟಿಯಿಂದ ನಿಡ್ಡೋಡಿ ಸ್ಥಾವರದ ಬಗ್ಗೆ ಸರ್ಕಾರ ಒಲವು ತೋರಿದೆ. ಇಂತಹ ವಿಚಾರಗಳಲ್ಲಿ ಅಭಿವೃದ್ಧಿ ದೃಷ್ಟಿಕೋನ ಮುಖ್ಯವಾಗಬೇಕು. ಪಕ್ಷಾತೀತ ಸಹಕಾರ ಏರ್ಪಡಬೇಕಾದುದು ಅವಶ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.