ಮಥುರಾ (ಪಿಟಿಐ): ಪವಿತ್ರ ಮಥುರಾದಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದ ವಿಧವೆಯರು ನೆಲೆಕಂಡುಕೊಳ್ಳಬಾರದು ಎಂದು ಹೇಳಿಕೆ ನೀಡುವ ಮೂಲಕ ಸಂಸದೆ ಹೇಮಾಮಾಲಿನಿ ವಿವಾದ ಸೃಷ್ಟಿಸಿದ್ದಾರೆ.
ಸಹಸ್ರಾರು ವಿಧವೆಯರಿಗೆ ಆಶ್ರಯ ತಾಣವಾಗಿರುವ ಮಥುರಾದಲ್ಲಿ (ವೃಂದಾವನ) ಎಲ್ಲಿಂದಲೋ ಬಂದವರು ನೆಲೆ ನಿಲ್ಲಬಾರದು ಎಂದವರು ಹೇಳಿದ್ದಾರೆ.
‘ಅವರು (ವಿಧವೆಯರು) ಇಲ್ಲಿನವರಲ್ಲದ ಪಕ್ಷದಲ್ಲಿ ಯಾವ್ಯಾವುದೋ ರಾಜ್ಯಗಳಿಂದ ಇಲ್ಲಿಗೆ ಬರುವ ಅಗತ್ಯವಿಲ್ಲ. ಬಂಗಾಳ ಮತ್ತು ಬಿಹಾರದಲ್ಲಿ ಅವರು ನೆಲೆಸಬಹುದಾದ ಪ್ರಸಿದ್ಧ ದೇವಾಲಯಗಳು ಸಾಕಷ್ಟಿವೆ’ ಎಂದು ಮಥುರಾ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಹೇಮಾಮಾಲಿನಿ ಹೇಳಿದ್ದಾರೆ.
ಮಥುರಾಗೆ ಬುಧವಾರ ಭೇಟಿ ನೀಡಿದ ಅವರು, ‘ವೃಂದಾವನದಲ್ಲಿ ಈಗಾಗಲೇ 40 ಸಾವಿರಕ್ಕೂ ಅಧಿಕ ವಿಧವೆಯರಿದ್ದಾರೆ. ನಗರದಲ್ಲಿ ಇನ್ನು ಜಾಗವಿಲ್ಲ. ಬಂಗಾಳದಿಂದ ಅಧಿಕ ಸಂಖ್ಯೆಯ ಜನ ಇಲ್ಲಿ ಬರುತ್ತಾರೆ. ಇದು ಸರಿಯಲ್ಲ. ಅವರೇಕೆ ಅಲ್ಲಿಯೇ ನಿಲ್ಲಬಾರದು’ ಎಂದು ಆಕ್ರೋಶದಿಂದ ನುಡಿದರು.