ಬೆಂಗಳೂರು: ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ವಿಬ್ಗಯೊರ್ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಭೇದಿಸಲು ಸುಮಾರು 50 ಮಂದಿ ಪೊಲೀಸ್ ಅಧಿಕಾರಿಗಳು ಶಾಲೆಯ 596 ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ತನಿಖೆಗಾಗಿ ಡಿಸಿಪಿ, ಇಬ್ಬರು ಎಸಿಪಿಗಳು, ಏಳು ಇನ್ಸ್ಪೆಕ್ಟರ್ಗಳು ಸೇರಿದಂತೆ ಸುಮಾರು 50 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರು ಶಾಲೆಯ 350 ಮಂದಿ ಬೋಧನಾ ಸಿಬ್ಬಂದಿ, 76 ವಾಹನ ಚಾಲಕರು, 20 ಸೆಕ್ಯುರಿಟಿ ಗಾರ್ಡ್ಗಳು, ಬೋಧಕೇತರ ಮತ್ತು ಕ್ರೀಡಾ ವಿಭಾಗದ 150 ಸಿಬ್ಬಂದಿಯನ್ನು ಹಲವು ಬಾರಿ ವಿಚಾರಣೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಕಟ್ಟಡ, ಪ್ರವೇಶದ್ವಾರ ಮತ್ತು ಆವರಣದಲ್ಲಿನ 48 ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಸುಮಾರು ಒಂದು ತಿಂಗಳ ದೃಶ್ಯಾವಳಿಯನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ, ಒಂದು ಸಾವಿರಕ್ಕೂ ಹೆಚ್ಚು ಮೊಬೈಲ್ ಕರೆಗಳ ವಿವರವನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ ಎಂದಿದ್ದಾರೆ.
ಲೋಪವಾಗಿಲ್ಲ: ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪ ಆಗಿಲ್ಲ. ಸರ್ಕಾರ ಅಥವಾ ಪೋಷಕರ ಒತ್ತಡಕ್ಕೆ ಮಣಿದು ಮುಸ್ತಫಾನನ್ನು ತರಾತುರಿಯಲ್ಲಿ ಬಂಧಿಸಿಲ್ಲ. ಮುಸ್ತಫಾ, ಲಾಲ್ಗಿರಿ, ವಸೀಂ ಪಾಷಾ ಸೇರಿದಂತೆ ಹಲವು ಸಿಬ್ಬಂದಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದೆವು. ಅವರಲ್ಲಿ ಮುಸ್ತಫಾನ ಹೇಳಿಕೆ ಮತ್ತು ವರ್ತನೆಯ ಬಗ್ಗೆ ಸಂಶಯ ಮೂಡಿದ್ದರಿಂದ ಆತನನ್ನು ಬಂಧಿಸಲಾಯಿತು. ಆ ಬಗ್ಗೆ ನ್ಯಾಯಾಲಯಕ್ಕೆ ಜು.20ರಂದು ವರದಿಯೊಂದನ್ನು ಸಲ್ಲಿಸಲಾಗಿತ್ತು. ‘ಮುಸ್ತಫಾನನ್ನು ಸಂಶಯದ ಮೇಲೆ ಬಂಧಿಸಲಾಗಿದೆ’ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ವೇಳೆ ಠಾಣಾಧಿಕಾರಿಗೆ ಯಾವುದೇ ವ್ಯಕ್ತಿಯ ಮೇಲೆ ಸಂಶಯ ಬಂದರೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲು ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್ಪಿಸಿ) ಅವಕಾಶವಿದೆ. ತನಿಖೆ ನಂತರ ಬಂಧಿತ ವ್ಯಕ್ತಿಯ ವಿರುದ್ಧ ಸೂಕ್ತ ಸಾಕ್ಷ್ಯ ಲಭ್ಯವಾಗದಿದ್ದರೆ ಪ್ರಕರಣದಲ್ಲಿ ಆತನ ಪಾತ್ರವಿಲ್ಲ ಅಥವಾ ಆತ ನಿರಪರಾಧಿ ಎಂದು ಠಾಣಾಧಿಕಾರಿಯು ನ್ಯಾಯಾಲಯಕ್ಕೆ ವರದಿ ಸಲ್ಲಿಸಬಹುದಾಗಿದೆ (ಸಿಆರ್ಪಿಸಿ–169ನೇ ಸೆಕ್ಷನ್ ಪ್ರಕಾರ). ಈ ಹಿಂದೆಯೂ ವಿವಿಧ ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿ, ಸಾಕ್ಷ್ಯ ಲಭ್ಯವಾಗದ ಕಾರಣ ಅವರ ಬಿಡುಗಡೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವ ಉದಾಹರಣೆಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿಗಳಾದ ಲಾಲ್ಗಿರಿ ಮತ್ತು ವಸೀಂ ಪಾಷಾನನ್ನು ಬುಧವಾರ ಬೆಳಿಗ್ಗೆ ಶಾಲೆಗೆ ಕರೆದೊಯ್ದು ಘಟನಾ ಸ್ಥಳದ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಲಾಗಿದೆ. ಮುಸ್ತಫಾನಿಗೆ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಫಿ) ನಡೆಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತರಗತಿಗಳು ಪುನರಾರಂಭ
ಶಾಲೆಯ 1ರಿಂದ 4ರವರೆಗಿನ ತರಗತಿಗಳು ಬುಧವಾರದಿಂದ ಪುನರಾರಂಭವಾದವು. ಪೋಷಕರೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು, ಆಡಳಿತ ಮಂಡಳಿಯು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.