ಬೆಂಗಳೂರು: ‘ಬೆಂಗಳೂರು ನಗರವು ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದೆ. ಬಿಬಿಎಂಪಿ ವಿಭಜನೆ ಮಾಡುವುದರಿಂದ ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಸರ್ಕಾರವು ವಿಭಜನೆಯ ನಿರ್ಧಾರವನ್ನು ಕೈಬಿಡಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸರ್ಕಾರವು ಕೇವಲ ಐಎಎಸ್ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಪಾಲಿಕೆಯನ್ನು ವಿಭಜನೆ ಮಾಡಲು ಮುಂದಾಗಿದೆ. ವಿಭಜನೆಯ ಪರಿಣಾಮ ಪಾಲಿಕೆ ಯೋಜನೆಗಳು ಅಸ್ತವ್ಯಸ್ತವಾಗುತ್ತವೆ ಹಾಗೂ ಪಾಲಿಕೆ ಕೈಗೊಂಡಿರುವ ಕಾಮಗಾರಿಗಳು ಅರ್ಧಕ್ಕೆ ನಿಂತು ಸಾರ್ವಜನಿಕರ ಹಣ ಪೋಲಾಗುತ್ತದೆ’ ಎಂದರು.
‘ಪಾಲಿಕೆಯ ವಿಭಜನೆ ಪರೋಕ್ಷವಾಗಿ ಅಖಂಡ ಕರ್ನಾಟಕದ ಏಕತೆಗೆ ಧಕ್ಕೆಯಾಗಿದ್ದು, ಮುಂದೊಂದು ದಿನ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕ ರಾಜ್ಯ ವಿಭಜನೆಗೆ ಪ್ರೇರಣೆ ನೀಡಿದಂತಾಗುತ್ತದೆ’ ಎಂದು ಹೇಳಿದರು.
‘ವಿಭಜನೆ ಕೈಬಿಟ್ಟು, ಪಾಲಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಗಟ್ಟಿ ಸಧೃಡಗೊಳಿಸಬೇಕು ಎಂದರು.