ಪರ್ತ್ (ಪಿಟಿಐ): ಅಪಘಾತಕ್ಕೀಡಾಗಿರುವ ಮಲೇಷ್ಯಾ ಏರ್ಲೈನ್ಸ್ನ ವಿಮಾನದ ವೈಮಾನಿಕ ಶೋಧ ಕಾರ್ಯಾಚರಣೆಯನ್ನು ಮಂಗಳವಾರ ಭಾರಿ ಚಂಡಮಾರುತದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.
ಹಿಂದೂ ಮಹಾ ಸಾಗರದ ಆಳದಲ್ಲಿ ಪತ್ತೆ ಕಾರ್ಯದಲ್ಲಿ ನಿರತವಾಗಿರುವ ಮಿನಿ–ಜಲಾಂತರ್ಗಾಮಿ ನೌಕೆ ‘ಬ್ಲ್ಯೂಫಿನ್–21’ 9ನೇ ಹಂತದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು, ವಿಮಾನದ ಯಾವುದೇ ಅವಶೇಷ ಪತ್ತೆಯಾಗಿಲ್ಲ.
‘ಜಾಕ್ ಚಂಡಮಾರುತದಿಂದ ಪ್ರತಿಕೂಲ ಹವಾಮಾನ ಉಂಟಾಗಿದ್ದು, ಉದ್ದೇಶಿತ ವೈಮಾನಿಕ ಶೋಧನೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ’ ಎಂದು ಪತ್ತೆ ಕಾರ್ಯದ ನೇತೃತ್ವ ವಹಿಸಿರುವ ಜಂಟಿ ಸಂಸ್ಥೆ ಸಹಕಾರ ಕೇಂದ್ರ ಹೇಳಿದೆ.
ನೆಲಕ್ಕಿಳಿದಿರುವ ವಿಮಾನ? (ಕ್ವಾಲಾಲಂಪುರ ವರದಿ): ಕುತೂಹಲಕರ ರೀತಿ ನಾಪತ್ತೆಯಾದ ಮಲೇಷ್ಯಾ ವಿಮಾನದ ಯಾವುದೇ ಅವಶೇಷಗಳು ಈವರೆಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಯಾವುದೋ ಸ್ಥಳದಲ್ಲಿ ನೆಲಕ್ಕಿಳಿದಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮ ತಿಳಿಸಿದೆ.
ಮಲೇಷ್ಯಾ ಏರ್ಲೈನ್ಸ್ನ ಎಂಎಚ್370 ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಅಂತ್ಯವಾಗಿರುವ ಬದಲಿಗೆ ಎಲ್ಲೋ ಭೂಮಿಗೆ ಇಳಿದಿರಬಹುದು ಎಂದು ಅಂತರರಾಷ್ಟ್ರೀಯ ತನಿಖಾ ತಂಡ ಶಂಕಿಸಿರುವುದಾಗಿ ‘ನ್ಯೂ ಸ್ಟ್ರೇಟ್ ಟೈಮ್ಸ್’ ವರದಿ ಮಾಡಿದೆ.