ನವದೆಹಲಿ (ಪಿಟಿಐ): ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್ಡಿಐ) ಈಗಿರುವ ಶೇ 26ರಿಂದ 49ಕ್ಕೆ ಏರಿಸಲು ದಾರಿ ಮಾಡಿಕೊಡುವ ವಿಮಾ ಮಸೂದೆಯನ್ನು ಶಿವಸೇನಾ ವಿರೋಧಿಸಿದ್ದು, ಇತರ ವಿರೋಧ ಪಕ್ಷಗಳ ಜತೆ ಕೈಜೋಡಿಸಿದೆ.
ನೌಕರರು, ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸರ್ಕಾರ ಮಸೂದೆಯಲ್ಲಿ ಸೂಕ್ತ ತಿದ್ದುಪಡಿ ತರದೇ ಇದ್ದಲ್ಲಿ ತಮ್ಮ ಪಕ್ಷ ವಿಮಾ ಮಸೂದೆಯನ್ನು ವಿರೋಧಿಸುತ್ತದೆ ಎಂದು ಶಿವಸೇನಾ ವಕ್ತಾರ ಹಾಗೂ ಸಂಸದ ಅರವಿಂದ್ ಸಾವಂತ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಮಾ ಮಸೂದೆಯನ್ನು ಒಗ್ಗಟ್ಟಿನಿಂದ ವಿರೋಧಿಸಲು ಕಾಂಗ್ರೆಸ್, ಜೆಡಿಯು ಹಾಗೂ ತೃಣಮೂಲ ಕಾಂಗ್ರೆಸ್ ನಿರ್ಧರಿಸಿವೆ.
ಆದರೆ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮಾತ್ರ ವಿಮಾ ಮಸೂದೆಯನ್ನು ವಿನಾಕಾರಣ ವಿರೋಧಿಸುವುದಿಲ್ಲ ಎಂದು ಹೇಳಿದೆ. ಶಿವಸೇನಾ ಲೋಕಸಭೆಯಲ್ಲಿ 18 ಸಂಸದರನ್ನು ಹಾಗೂ ರಾಜ್ಯಸಭೆಯಲ್ಲಿ ಮೂರು ಸದಸ್ಯರನ್ನು ಹೊಂದಿದೆ.
ವಿಮಾ ಮಸೂದೆ ವಿಚಾರದಲ್ಲಿ ಪ್ರಮುಖ ಮಿತ್ರಪಕ್ಷವೇ ಸರ್ಕಾರವನ್ನು ವಿರೋಧಿಸುವುದರಿಂದ ವಿರೋಧ ಪಕ್ಷಗಳಿಗೆ ಮತ್ತಷ್ಟು ಹುಯಿಲೆಬ್ಬಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಮಸೂದೆ ಅಂಗೀಕಾರಕ್ಕೆ ಜಂಟಿ ಅಧಿವೇಶನ ಮಾಡಲು ನಿರ್ಧರಿಸಿದಾಗಲೂ ಸರ್ಕಾರದ ಬಲವನ್ನು ಇದು ಕುಗ್ಗಿಸುತ್ತದೆ. ವಿಮಾ ಮಸೂದೆ ಹೊರತಾಗಿ ವಿರೋಧ ಪಕ್ಷಗಳು ಸರಕು ಹಾಗೂ ಸೇವಾ ತೆರಿಗೆ ಮತ್ತು ಕಾರ್ಮಿಕ ಕಾಯ್ದೆ ಸುಧಾರಣೆ ಮಸೂದೆಗಳ ಅಂಗೀಕಾರಕ್ಕೂ ರಾಜ್ಯಸಭೆಯಲ್ಲಿ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.
‘ವಿಮೆ, ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮಸೂದೆಗಳಿಗೆ ನಾವು ಬೇಷರತ್ ಬೆಂಬಲ ನೀಡುವುದಿಲ್ಲ. ಅವುಗಳನ್ನು ಪರಿಶೀಲಿಸಿ ಆಮೇಲೆ ನಿರ್ಧಾರಕ್ಕೆ ಬರುತ್ತೇವೆ’ ಎಂದು ಕಾಂಗ್ರೆಸ್ ಹೇಳಿದೆ. ಇನ್ನೊಂದೆಡೆ, ಕಪ್ಪುಹಣದ ವಿಷಯ ಚರ್ಚಿಸಲು ಪ್ರಶ್ನೋತ್ತರ ವೇಳೆಯನ್ನು ಮಂಗಳವಾರದ ಕಲಾಪ ಪಟ್ಟಿಯಿಂದ ಕೈಬಿಡುವಂತೆ ಕೆ.ಸಿ.ತ್ಯಾಗಿ ಹಾಗೂ ಟಿಎಂಸಿ ಸಂಸದ ಡೆರೆಕ್್ ಒಬ್ರೇನ್್ ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿ ಅವರಿಗೆ ನೋಟಿಸ್ ನೀಡಿದ್ದಾರೆ.
ನಡೆಯದ ಕಲಾಪ |
ಸುಗಮ ಕಲಾಪ: ಸಹಕಾರ ಕೋರಿದ ಮೋದಿ
ನವದೆಹಲಿ (ಪಿಟಿಐ): ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಸುಧಾರಣಾ ಕ್ರಮಗಳನ್ನು ವಿರೋಧಿಸುವ ನಿಲುವನ್ನು ವಿರೋಧ ಪಕ್ಷಗಳು ಸ್ಪಷ್ಟಪಡಿಸಿದ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನ ಯಶಸ್ಸಿಗೆ ವಿರೋಧ ಪಕ್ಷಗಳು ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ದೇಶದ ಜನತೆ ಸರ್ಕಾರ ನಡೆಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಅದೇ ರೀತಿ ಸಂಸತ್ ಭವನದಲ್ಲಿ ಕುಳಿತಿರುವ ಎಲ್ಲ ಸಂಸದರ ಮೇಲೂ ದೇಶವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಇದೆ’ ಎಂದು ಹೇಳಿದ್ದಾರೆ.
ಸೋಮವಾರ ಆರಂಭವಾದ ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪದ ನಂತರ ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ನೀಡಿದ ಸಹಕಾರ ಹಾಗೂ ನಡೆದುಕೊಂಡ ರೀತಿಯನ್ನು ಮನದುಂಬಿ ಶ್ಲಾಘಿಸಿದ ಮೋದಿ, ಅದೇ ಸಹಕಾರವನ್ನು ಚಳಿಗಾಲ ಅಧಿವೇಶನದಲ್ಲೂ ನಿರೀಕ್ಷಿಸುತ್ತಿರುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.