ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ವಿಮಾ ಮಸೂದೆ ಸೇರಿದಂತೆ ಹಲವು ಸುಧಾರಣಾ ಹಾಗೂ ತಿದ್ದುಪಡಿ ಮಸೂದೆಗಳನ್ನು ಇದೇ ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ನ ತೀವ್ರ ವಿರೋಧದ ನಡುವೆಯೂ ಸರ್ಕಾರವು ವಿಮಾ ಮಸೂದೆ ಮಂಡಿಸಲು ಹಾಗೂ ಭೂಸ್ವಾಧೀನ ಕಾಯ್ದೆ ಮತ್ತು ಕಲ್ಲಿದ್ದಲು ನಿಯಂತ್ರಣ ಪ್ರಾಧಿಕಾರ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಅನೇಕ ಸುಧಾರಣಾ ಮಸೂದೆಗಳ ಜಾರಿಗೆ ಸರ್ಕಾರ ಬದ್ಧವಾಗಿದ್ದು ಕಾಂಗ್ರೆಸ್ ವಿರೋಧ ಅಡ್ಡಿಯಾಗದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಸೂದೆ ಜಾರಿಗೆ ಜಂಟಿ ಅಧಿವೇಶನ ಕರೆಯುವ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸದ ಅವರು, ಸರ್ಕಾರದ ಸುಧಾರಣಾ ಕ್ರಮಗಳನ್ನು ವಿರೋಧಿಸುವವರು ಚುನಾವಣೆಗಳಲ್ಲಿ ಪದೇಪದೇ ಸೋಲುತ್ತಲೇ ಹೋಗುತ್ತಾರೆ ಎಂದು ಲೇವಡಿ ಮಾಡಿದರು. ಯುಪಿಎ ಆಡಳಿತಾವಧಿಯಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಯಾಗುವ ವೇಳೆ ಸುಮ್ಮನಿದ್ದ ಬಿಜೆಪಿ ಈಗೇಕೆ ಈ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಅದರ ಪರಿಣಾಮಗಳನ್ನು ಈಗಾಗಲೇ ಕಾಂಗ್ರೆಸ್ ಅನುಭವಿಸಿದೆ ಎಂದರು.
ಈ ನಡುವೆ ವಿಮಾ ಮಸೂದೆ ಹಾಗೂ ಇನ್ನಿತರ ತಿದ್ದುಪಡಿ ಮಸೂದೆಗಳ ಕುರಿತು ಕೆಲವು ಆಕ್ಷೇಪಗಳನ್ನು ಹೊಂದಿರುವುದಾಗಿ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೇಳಿದ್ದಾರೆ.