ನವದೆಹಲಿ (ಐಎಎನ್ಎಸ್): ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಆಡಳಿತಾರೂಢ ಸಮಾಜವಾದಿ ಪಕ್ಷದ ಸಂಸದ ನರೇಶ್್ ಅಗರವಾಲ್ ನೀಡಿದ ಹೇಳಿಕೆ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ಬದಾಯೂಂ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ಮಹಿಳೆ ಮೇಲೆ ನಡೆದ ಅತ್ಯಾಚಾರ ಕುರಿತು ಅವರು ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ‘ಬೇರೊಬ್ಬರ ಸಾಕು ಪ್ರಾಣಿಗಳನ್ನು ಕೂಡ ಬಲವಂತದಿಂದ ಎಳೆದೊಯ್ಯಲಾಗದು. ಬಲವಂತ ಮಾಡಿದರೆ ಪ್ರಾಣಿಗಳು ನಮ್ಮೊಂದಿಗೆ ಬರಲಾರವು’ ಎಂದು ಸಂಸದ ಅಗರವಾಲ್ ಖಾಸಗಿ ಸುದ್ದಿ ವಾಹಿನಿಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಅನೇಕ ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಂಸದರ ಈ ಹೇಳಿಕೆಯನ್ನು ‘ನಾಚಿಕೆಗೇಡು ಹಾಗೂ ಕೀಳು ಅಭಿರುಚಿ ಪ್ರತೀಕ’ ಎಂದು ಕಟುವಾಗಿ ಟೀಕಿಸಿವೆ.