ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕುಲಪತಿ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ವರದಿ ಆಧರಿಸಿ ಈ ಪತ್ರ (ಪ್ರ.ವಾ., ಅ.21). ಶಿಕ್ಷಣ, ಸಂಶೋಧನೆಯಲ್ಲಿ ಉನ್ನತ ಮಟ್ಟಕ್ಕೆ ಏರಬೇಕಿದ್ದ ವಿ.ವಿಗಳು ಭ್ರಷ್ಟಾಚಾರದಿಂದಾಗಿ ವಿವಾದಕ್ಕೆ ಒಳಗಾಗುತ್ತಿರುವುದು ಕಳವಳಕಾರಿ. ಈ ಪ್ರಕರಣದಲ್ಲಿ ರಾಜ್ಯಪಾಲರು ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ. ಕರ್ನಾಟಕ ವಿ.ವಿ ಕಟ್ಟಿ ನಿಲ್ಲಿಸಿದ ಡಾ. ಡಿ. ಸಿ. ಪಾವಟೆ ಅವರಂಥ ಮಹಾನುಭಾವರ ಶ್ರಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೂ ಉಳಿಯುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.
ನಮ್ಮ ವಿಶ್ವವಿದ್ಯಾಲಯಗಳ ಘನತೆ ಎತ್ತಿಹಿಡಿಯುವಂಥ ಕೆಲಸ ಆಗಬೇಕಿದೆ. ಶೈಕ್ಷಣಿಕ ಕ್ಷೇತ್ರದ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಸರ್ಕಾರದ ಒಂದು ಗುಂಡು ಸೂಜಿಯನ್ನೂ ಸ್ವಂತಕ್ಕೆ ಸರ್ ಎಂ.ವಿಶ್ವೇಶ್ವರಯ್ಯನವರು ಬಳಸುತ್ತಿರಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಡಾ.ಎಚ್. ನರಸಿಂಹಯ್ಯನವರು (ಎಚ್ಚೆನ್) ದಿನನಿತ್ಯ ತಾವು ವಾಸವಿದ್ದ ನ್ಯಾಷನಲ್ ಕಾಲೇಜ್ ಹಾಸ್ಟೆಲ್ಗೆ ಹೋಗಲು ಎಂದೂ ವಿ.ವಿ ಕಾರನ್ನು ಬಳಸುತ್ತಿರಲಿಲ್ಲ. ಅಂಥ ಪರಮ ಪ್ರಾಮಾಣಿಕರು ನಮಗೆ ಇಂದು ಆದರ್ಶವಾಗಬೇಕಿದೆ.
ತಾನು ಇಂಥ ವಿ.ವಿಯಲ್ಲಿ ಓದಿದ ವಿದ್ಯಾರ್ಥಿ ಎಂದು ನಮ್ಮ ರಾಜ್ಯದ ಯುವಕರು ಹೆಮ್ಮೆಯಿಂದ ಹೇಳಿಕೊಳ್ಳುವಂಥ, ಭ್ರಷ್ಟಾಚಾರಮುಕ್ತ, ಪಾರದರ್ಶಕ ಶೈಕ್ಷಣಿಕ ವಾತಾವರಣ ವಿ.ವಿಗಳಲ್ಲಿ ಮರು ಸೃಷ್ಟಿ ಆಗಬೇಕು.