ಯಾದಗಿರಿ: ಸಮೀಪದ ನಾಯ್ಕಲ್ ಗ್ರಾಮದ ಕ್ರೈಸ್ತ ಬಾಂಧವರು ಯೇಸುವಿನ ಪುನರುತ್ಥಾನ ಉತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ ಸಮೀಪದ ಬೆಟ್ಟದಲ್ಲಿರುವ ಶಿಲುಬೆಗೆ ತೆರಳಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಬಳಿಕ ಯೇಸುವಿನ ಭಜನೆ ಭಜಿಸುತ್ತಾ, ಏಸುವಿನ ಭಾವಚಿತ್ರದ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಮೆಥೋಡಿಸ್ಟ್ ಚರ್ಚ್ಗೆ ತಲುಪಿತು. ಮಧ್ಯಾಹ್ನದವರೆಗೆ ಆರಾಧನೆ ಮತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಜನರಿಗೆ ಶಾಂತಿ, ನೆಮ್ಮದಿ ಲಭಿಸಲೆಂದು ಯೇಸುವಿನಲ್ಲಿ ಪ್ರಾರ್ಥಿಸಲಾಯಿತು.
ಚರ್ಚ್ನ ಸಭಾಪಾಲಕ ರೆ. ಜ್ಞಾನಮಿತ್ರ, ಪ್ರಾರ್ಥನೆ ಸಲ್ಲಿಸಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉಗ್ರಾಣಿಕರಾದ ರವಿಕುಮಾರ ವಂದಲಿ, ಕಾರ್ಯದರ್ಶಿ ಸುಮಂತ್ ಮುಂದಿನಮನಿ, ಖಜಾಂಚಿ ಜಾನಪ್ಪ, ಮರೆಪ್ಪ ಹಳ್ಳಿ, ಪರಮಪ್ಪ, ಜಯವಂತ, ಯೇಸುಮಿತ್ರಪ್ಪ, ದೇವಿಂದ್ರಪ್ಪ, ಮಲ್ಲಪ್ಪ, ಶಾಂತಪ್ಪ ಮೆಲಗಿರಿ, ಶೇಖಪ್ಪ ಯಡ್ಡಳ್ಳಿ, ದೇವಮಿತ್ರಪ್ಪ ವಂದ್ಲಿ, ಭೀಮಪ್ಪ ಮಳ್ಳಳ್ಳಿ, ಭೀಮಾಶಂಕರ ಹಳ್ಳಿ, ಕ್ರೈಸ್ತ ಸಮಾಜದ ಅನೇಕರು ಪಾಲ್ಗೊಂಡಿದ್ದರು.
ಯಡ್ಡಳ್ಳಿ: ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಭಾನುವಾರ ಕ್ರೈಸ್ತ ಸಮುದಾಯದ ಜನತೆ ಯೇಸು ಕ್ರಿಸ್ತನ ಪುನರುಸ್ಥಾನ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.ಯೇಸುವನ್ನು ಶಿಲುಬೆಗೇರಿಸಿದ ಶುಕ್ರವಾರವನ್ನು ಶುಭ ಶುಕ್ರವಾರವೆಂದು, ನಂತರದ ಮೂರನೇ ದಿನಕ್ಕೆ ಯೇಸುವಿನ ಪುನರ್ಜನ್ಮವನ್ನು ಪುನರುತ್ಥಾನ ದಿನವಾಗಿ ಆಚರಿಸಲಾಗುತ್ತದೆ.
ಈಸ್ಟರ್ ಸಂಡೆ ಪ್ರಯುಕ್ತ ಬೆಳಿಗ್ಗೆ ಸಿಂಗರಿಸಿದ ಎತ್ತಿನ ಬಂಡಿ ಮೇಲೆ ಏಸುಕ್ರಿಸ್ತನ ಭಾವಚಿತ್ರವನ್ನು ಇಟ್ಟುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಮೆರವಣಿಗೆಯುದ್ದಕ್ಕೂ ಮಕ್ಕಳ, ಯುವಕರ ಲೇಝಿಮ್, ಕೋಲಾಟ ಹಾಗೂ ಭಜನೆ ಗಮನ ಸೆಳೆಯಿತು.
ಪಾಸ್ಟರ್ ಪೌಲ್ರಾಜ್ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜ್ಞಾನಮಿತ್ರ ಆಶನಾಳ, ಶಿರೋಮಣಿ ಕಿಲ್ಲನಕೇರಿ, ರಾಜಪ್ಪ ಆರಬೋಳ, ಜಯಂತಪ್ಪ ದಂಡನ್, ಎಸ್. ಸೋಸಳ್ಳಿ, ಮಿತ್ರಪ್ಪ ನರಸಣೋರ್ ಇದ್ದರು.