ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಡಿಸೆಂಬರ್ 19ರಿಂದ 22ರವರೆಗೆ ಮೂಡುಬಿದಿರೆ ಯಲ್ಲಿ ಹಮ್ಮಿಕೊಂಡಿರುವ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್–2013’ರ ಅಧ್ಯಕ್ಷರನ್ನಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ‘ವಿವೇಕ ರೈ ಅವರು ಕನ್ನಡದ ಹಿರಿಯ ವಿದ್ವಾಂಸರಾಗಿದ್ದು, ಸಂಶೋಧಕರಾಗಿರುವ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಣಚದವ ರಾದ ವಿವೇಕ ರೈ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾಗಿ ಸುಮಾರು 34 ವರ್ಷ ಅಧ್ಯಾಪನ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಜರ್ಮನಿಯ ವ್ಯೂತ್ಸ್ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕ ರಾಗಿದ್ದಾರೆ. ಮಂಗಳೂರಿನ ಪಿಲಿಕುಳ ನಿಸರ್ಗ ಧಾಮದ ಸಂಸ್ಕೃತಿ ಗ್ರಾಮದ ರೂಪುರೇಷೆ ಮತ್ತು ನಿರ್ವಹಣೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ದಲ್ಲಿ ತೊಡಗಿಸಿಕೊಂಡಿದ್ದಾರೆ.
ಉದ್ಘಾಟನೆ 19ಕ್ಕೆ: ಡಿಸೆಂಬರ್ 19ರಂದು ರಾಜ್ಯದ ಸಮಗ್ರ ಜಾನಪದ ವೈಶಿಷ್ಟ್ಯ ಪ್ರತಿನಿಧಿಸುವ ಮೆರವಣಿಗೆ, ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಡಿಸೆಂಬರ್ 20ರಿಂದ 22ರವರೆಗೆ ಸಾಹಿತ್ಯ, ಕೃಷಿ, ಜಾನಪದ, ವಿದ್ಯಾರ್ಥಿ ಸಮ್ಮೇಳನಗಳು ನಡೆಯ ಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ನಡೆಸುವ ಕೃಷಿ ಮೇಳವನ್ನು ಈ ಬಾರಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿ ದಿನ ಸಂಜೆ 6ರಿಂದ ರಾತ್ರಿ 12 ಗಂಟೆವರೆಗೆ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕಾಗಿ 100 ಎಕರೆ ಸ್ಥಳದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ 55 ಸಮಿತಿಗಳನ್ನು ರಚಿಸಲಾಗಿದೆ. 1 ಲಕ್ಷ ಸದಸ್ಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದರು.