ಸಿಡ್ನಿ/ನವದೆಹಲಿ (ಪಿಟಿಐ/ಐಎಎನ್ಎಸ್): ಸಿಡ್ನಿ ಕೆಫೆಯಲ್ಲಿ ಉಗ್ರರ ಒತ್ತೆಯಲ್ಲಿದ್ದ ಇನ್ಫೋಸಿಸ್ ಉದ್ಯೋಗಿ ಭಾರತದ ವಿಶ್ವಕಾಂತ್ ಅಂಕಿರೆಡ್ಡಿ ಸೇರಿದಂತೆ ಇಬ್ಬರು ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರು ತಿಳಿಸಿದ್ದಾರೆ.
ಅಲ್ಲದೇ, ಇಡೀ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅವಲೋಕಿಸುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ.
ಇನ್ನು, ವಿಶ್ವಕಾಂತ್ ಅಂಕಿರೆಡ್ಡಿ ಹಾಗೂ ಪುಷ್ಪೆಂದು ಘೋಷ್ ಅವರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.
ಮತ್ತೊಂದೆಡೆ, ವಿಶ್ವಕಾಂತ್ ಅವರಿಗೆ ಸಂಬಂಧಿಸಿದಂತೆ 'ಹೌದು ಅವರು ಸುರಕ್ಷಿತವಾಗಿದ್ದಾರೆ' ಎಂದು ಸಿಡ್ನಿಯಲ್ಲಿರುವ ಭಾರತದ ಉಪ ಕಾನ್ಸುಲರ್ ಜನರಲ್ ವಿನೋದ್ ಬಗದೆ ಅವರು ದೂರವಾಣಿ ಮುಖಾಂತರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಗ ಸುರಕ್ಷಿತ: ಉಗ್ರರ ಒತ್ತೆಯಲ್ಲಿದ್ದ ತಮ್ಮ ಸುರಕ್ಷಿತವಾಗಿದ್ದಾನೆ ಎಂದು ವಿಶ್ವಕಾಂತ್ ಅಂಕಿರೆಡ್ಡಿ ಅವರ ತಂದೆ ಈಶ್ವರ್ ರೆಡ್ಡಿ ಅವರು ತಿಳಿಸಿದ್ದಾರೆ.