ರಾಮನಗರ: ಅರ್ಕಾವತಿ ವಿದ್ಯಾ ಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ ವಿಷ್ಣು ಗಣಪತಿ ಸೇರಿದಂತೆ 29 ವಿವಿಧ ದೇವರ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಇದೇ ಭಾನುವಾರ ವಿಸರ್ಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಪಿ.ವೈ.ರವೀಂದ್ರ ಹೇರ್ಳೆ ತಿಳಿಸಿದ್ದಾರೆ.
‘ನಗರದ ಛತ್ರದ ಬೀದಿಯಲ್ಲಿ ಗಣೇಶೋತ್ಸವವನ್ನು ವರ್ಷದಿಂದ ವರ್ಷಕ್ಕೆ ವೈವಿಧ್ಯಮಯವಾಗಿ ಆಚರಿಸುತ್ತಾ ಕಳೆದ 29 ವರ್ಷಗಳಿಂದ ಸತತವಾಗಿ ತಾಲ್ಲೂಕಿನ ಸಾರ್ವಜನಿಕರ ಸಹಕಾರದೊಂದಿಗೆ ಗಣೇಶ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರತಿ ವರ್ಷವೂ ಹೊಸ ಪ್ರಯೋಗದೊಂದಿಗೆ ಮೋದಕ ಪ್ರಿಯನ ಅನೇಕ ರೂಪಗಳ ದರ್ಶನ ಭಾಗ್ಯ ದೊರಕಿಸಿ ಭಕ್ತಾದಿಗಳಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಸೇವಾ ಸಂಘವು ಶ್ರಮಿಸುತ್ತಿದೆ’ ಎಂದರು.
ಈ ಬಾರಿ 30ನೇ ವರ್ಷದ ಅಂಗವಾಗಿ ನಗರದ ಜನತೆಗೆ ವಿಶೇಷ ರೀತಿಯಲ್ಲಿ ಪರಿಚಯಿಸಲು ನಿರ್ಧರಿಸಿ ಶ್ರೀ ವಿಷ್ಣು ಗಣಪತಿ ಪ್ರಧಾನ ಮೂರ್ತಿ ಜತೆಗೆ ಮುಜ್ಗಲ್ ಪುರಾಣದ 32 ಬಗೆಯ ಬಾಲಗಣಪತಿ ಮೂರ್ತಿಗಳ ಜತೆಗೆ ಶ್ರೀ ಲಕ್ಷ್ಮಿ, ಸರಸ್ವತಿ, ವೆಂಕಟೇಶ್ವರ, ಶ್ರೀರಾಮ, ಕೃಷ್ಣ, ಹನುಮಂತ, ಮಂಜುನಾಥ, ಶಿವಪಾರ್ವತಿ, ಅಯ್ಯಪ್ಪ, ಸುಬ್ರಹ್ಮಣ್ಯ, ಸಾಯಿಬಾಬಾ, ಅನಂತ ಪದ್ಮನಾಭ, ಬ್ರಹ್ಮ, ರಾಘವೇಂದ್ರ, ಪಾಂಡುರಂಗ, ಅನ್ನಪೂರ್ಣೇಶ್ವರಿ, ಕಾವೇರಿಮಾತೆ, ಸೇರಿದಂತೆ ಸುಮಾರು 29 ವಿವಿಧ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು ಎಂದು ವಿವರಿಸಿದರು.
ಶ್ರೀ ಅರ್ಕೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಆಸ್ಥಾನ ಮಂಟಪ ವಿನ್ಯಾಸಗೊಳಿಸಿ ಆಗಸ್ಟ್ 29 ರಂದು ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿತ್ತು, ಆಂದಿನಿಂದ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಚಂಡಿಕಾ ಹೋಮ-ಹವನಗಳನ್ನು ನೆರವೇರಿಸಲಾಗಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ಈ ಹೊಸ ಪ್ರಯೋಗದ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದರು.
‘ಹೊರ ಜಿಲ್ಲೆಗಳ ಲಕ್ಷಾಂತರ ಮಂದಿ ಆಗಮಿಸಿ ಶ್ರೀ ವಿಷ್ಣುಗಣಪತಿ ಮತ್ತಿತರ ದೇವರುಗಳ ಮೂರ್ತಿಗಳ ದರ್ಶನ ಪಡೆದಿದ್ದಾರೆ. ಜಿಲ್ಲೆಯಲ್ಲಿಯೇ 60 ದಿನಗಳ ಕಾಲ ಸುದೀರ್ಘ ಅವಧಿಗೆ ಗಣೇಶೋತ್ಸವವನ್ನು ಆಚರಿಸಿರುವುದು ನಮ್ಮ ಸೇವಾ ಸಂಘದ ಪ್ರಥಮ ಪ್ರಯತ್ನವಾಗಿದೆ. ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ದೇವರುಗಳನ್ನು ರಂಗರಾಯನದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಗುವುದು’ ಎಂದರು. ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಗೇಶ್, ಪ್ರಧಾನ ಕಾರ್ಯದರ್ಶಿ ಉಮಾಮಹಾದೇವಪ್ಪ, ಸಂಚಾಲಕ ಆಟೋರಾಜು, ಪದಾಧಿಕಾರಿಗಳಾದ ರೋಹಿತ್, ಪ್ರಶಾಂತ್, ಶಾಂತಕುಮಾರ್, ಪ್ರದೀಪ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.