ಬೆಂಗಳೂರು: ‘ನಗರದ ಯಾವುದಾದರೂ ಒಂದು ಪ್ರಮುಖ ವೃತ್ತಕ್ಕೆ ಮಡಿವಾಳ ಮಾಚಿದೇವರ ಹೆಸರು ಇಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮಂಗಳವಾರ ಮೇಯರ್ ಎನ್. ಶಾಂತಕುಮಾರಿ ಅವರಿಗೆ ಮನವಿ ಅರ್ಪಿಸಿದರು.
‘ಕನ್ನಡ ನಾಡಿನ ಮಹಾನ್ ಶರಣರಲ್ಲಿ ಒಬ್ಬರಾದ ಮಡಿವಾಳ ಮಾಚಿದೇವ ಅವರ ಹೆಸರನ್ನು ನಗರದಲ್ಲಿ ಯಾವುದೇ ರಸ್ತೆ ಇಲ್ಲವೆ ವೃತ್ತಕ್ಕೆ ಇದುವರೆಗೆ ಇಡದಿರುವುದು ಲೋಪ. ಅದನ್ನು ಈಗ ಸರಿಪಡಿಸಬೇಕು’ ಎಂದು ಅವರು ಹೇಳಿದರು. ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ಪ್ರಸ್ತಾವ ಮಂಡಿಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದು ಮೇಯರ್ ಶಾಂತಕುಮಾರಿ ಭರವಸೆ ನೀಡಿದರು.
ಪ್ರತಿಮೆಗಳಿಗೆ ಹಗ್ಗ: ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದ ಪ್ರಮುಖ ನಗರಗಳ ಹೆಸರುಗಳನ್ನು ಕನ್ನಡಮಯ ಮಾಡಿದಂತೆ ಬೆಂಗಳೂರಿನ ರಸ್ತೆ, ವೃತ್ತ, ಉದ್ಯಾನ ಹಾಗೂ ಆಸ್ಪತ್ರೆಗಳ ಇಂಗ್ಲಿಷ್ ಹೆಸರುಗಳನ್ನು ತೆಗೆದುಹಾಕಿ ಕನ್ನಡದ ಸಾಧಕರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
‘ರಾಣಿ ವಿಕ್ಟೋರಿಯಾ ಸೇರಿದಂತೆ ಇಂಗ್ಲಿಷರ ಪ್ರತಿಮೆಗಳನ್ನು ತೆಗೆದು ಯಾವುದಾದರೂ ವಸ್ತು ಸಂಗ್ರಹಾಲಯದಲ್ಲಿ ಇಡಬೇಕು. ಇಲ್ಲದಿದ್ದರೆ ಆ ಪ್ರತಿಮೆಗಳಿಗೆ ಕನ್ನಡಪರ ಹೋರಾಟಗಾರರು ಹಗ್ಗ ಹಾಕಿ ಎಳೆದು ಹಾಕುತ್ತಾರೆ’ ಎಂದು ಹೇಳಿದರು.