ಉಡುಪಿ: ಪ್ರವಾಸಿ ಟ್ಯಾಕ್ಸಿಗಳಿಗೆ ವೇಗ ನಿಯಂತ್ರಕ (ಸ್ವೀಡ್ ಗವರ್ನರ್) ಆಳ ವಡಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಸದಸ್ಯರು ಮಂಗಳವಾರ ಸೇವೆ ಸ್ಥಗಿತಗೊಳಿಸಿ ಮಣಿ ಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಸುಮಾರು 600 ಅನಧಿಕೃತ ವಾಹನಗಳು (ವೈಟ್ ಬೋರ್ಡ್) ಕಾನೂನು ಬಾಹಿರವಾಗಿ ಬಾಡಿಗೆ ಮಾಡುತ್ತಿವೆ. ಇದರಿಂದಾಗಿ ಕಾನೂನು ಪ್ರಕಾರ ರಸ್ತೆ ತೆರಿಗೆ, ಪರವಾನಗಿ ಮೊತ್ತ ಪಾವತಿಸುತ್ತಿರುವ ಟ್ಯಾಕ್ಸಿಗಳ ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ. ಬ್ಯಾಂಕ್ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗ ದಂತಹ ಪರಿಸ್ಥಿತಿ ಬಂದಿದೆ. ಅನಧಿಕೃತ ವಾಹನಗಳ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಟ್ಯಾಕ್ಸಿಗಳಿಗೆ ವೇಗ ನಿಯಂತ್ರಕವನ್ನು ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ. ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಕಡ್ಡಾಯ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವೇಗ ನಿಯಂತ್ರಕ ತಯಾರಿಕಾ ಕಂಪೆನಿ ಗಳ ಲಾಬಿ ಇದರ ಹಿಂದಿದೆ. ವೇಗ ನಿಯಂತ್ರಕ ಅಳವಡಿಸಿದರೆ ಪ್ರವಾಸಿಗರಿಗೆ ಸಮಯದ ಮಿತಿಯೊಳಗೆ ಒಳ್ಳೆಯ ಸೇವೆ ನೀಡುವುದಕ್ಕೆ ಇದರಿಂದ ತೊಂದರೆ ಆಗಲಿದೆ. ಅಲ್ಲದೆ ಇದನ್ನು ಅಳವಡಿಸಲು ಸುಮಾರು ₹18 ಸಾವಿರ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು.
ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸಲು ರಹದಾರಿ ಪಡೆದಿರುವ ಖಾಸಗಿ ಬಸ್ಗಳು ಮದುವೆ ಮತ್ತಿತರ ಸಮಾರಂಭ ಹಾಗೂ ಶಾಲಾ ಮಕ್ಕಳ ಪ್ರವಾಸ ಬಾಡಿಗೆಗೆ ಅಕ್ರಮವಾಗಿ ಹೋಗುತ್ತಿವೆ. ಇದರಿಂದ ಟ್ಯಾಕ್ಸಿ ಮಾಲೀಕರಿಗೆ ಹಾಗೂ ಸರ್ಕಾರಕ್ಕೂ ನಷ್ಟವಾಗುತ್ತಿದೆ. ಆಟೋ ರಿಕ್ಷಾಗಳು ಸಹ ವ್ಯಾಪ್ತಿ ಮೀರಿ ಸಂಚರಿಸುತ್ತಿವೆ. ಇದನ್ನು ತಡೆಗಟ್ಟಲು ಆಟೊಗಳಿಗೆ ಕಲರ್ ಕೋಡ್ ನೀಡಬೇಕು ಎಂದು ಆವರು ಆಗ್ರಹಿಸಿದರು.
ಅಸೋಸಿಯೇಷನ್ನ ಅಧ್ಯಕ್ಷ ಕೆ. ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್, ಕೋಶಾಧಿ ಕಾರಿ ಪ್ರಕಾಶ್ ಅಡಿಗ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಇದ್ದರು.