ಕುಷ್ಟಗಿ: ಕಳೆದ ಮೂರು ತಿಂಗಳಿನಿಂದಲೂ ವೇತನ ಪಾವತಿಸದೇ ಸತಾಯಿಸಲಾಗುತ್ತಿದೆ ಎಂದು ದೂರಿದ ಪುರಸಭೆಯ ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಅಧ್ಯಕ್ಷೆ ಮಂಜುಳಾ ನಾಗರಾಳ ಸೇರಿದಂತೆ ಸದಸ್ಯರು, ಅಧಿಕಾರಿಗಳಿಗೆ ಕಚೇರಿಯಲ್ಲಿಯೇ ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ನಡೆಯತು.
ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಕಾಪಾಡುವುದಕ್ಕೆ ನಮ್ಮನ್ನು ಬಳಸಿಕೊಳ್ಳುತ್ತೀರಿ ಆದರೆ ಸಂಬಳ ಪಾವತಿಸುವುದಕ್ಕೆ ಮೀನ ಮೇಷ ಎಣಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರಕಾರ್ಮಿಕರ ದಿಢೀರ್ ಪ್ರತಿಭಟನೆಯಿಂದ ವಿಚಲಿತರಾದ ಅಧ್ಯಕ್ಷೆ ಮಂಜುಳಾ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.
ಪೌರಕಾರ್ಮಿಕರನ್ನು ಗುತ್ತಿಗೆ ಪಡೆಯುವುದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ವಿಳಂಬಗೊಂಡಿತ್ತು, ವೇತನ ಪಾವತಿ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದ ನಂತರ ಪಾವತಿಗೆ ಸಮ್ಮತಿ ದೊರೆತಿದೆ. ಎರಡು ದಿನ ಅವಕಾಶ ಕೊಡಿ ಎಂದು ಮುಖ್ಯಾಧಿಕಾರಿ ಮಹಾದೇವ ಭೀಸೆ ಹೇಳಿದರು.
ಸ್ಥಳದಲ್ಲಿದ್ದ ಮುಖಂಡ ಟಿ.ಕೃಷ್ಣಮೂರ್ತಿ ಮತ್ತಿತರರು, ಪೌರಕಾರ್ಮಿಕರ ವೇತನ ವಿಳಂಬ ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.