ಬೆಂಗಳೂರು: ತುಂಬಿದ ಸಭೆಯ ಬಹಿರಂಗ ವೇದಿಕೆಯಲ್ಲಿ ಸಿಎಂಗೆ ಮುತ್ತಿಟ್ಟ ಮಹಿಳೆ... ವೇದಿಕೆ ಏರಿ ಬಂದ ಮಹಿಳೆ ಮುಖ್ಯಮಂತ್ರಿ ಜತೆ ನಿಂತು ಪೋಸುಕೊಟ್ಟು ಪೊಟೋ ತೆಗೆಸಿಕೊಂಡರು. ಕ್ಯಾಮೆರಾದ ಬೆಳಕು ಬಿದ್ದಷ್ಟೇ ವೇಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆನ್ನೆಗೆ ಮುತ್ತಿಟ್ಟರು. ಕ್ಷಣ ಮಾತ್ರದಲ್ಲಿ ವೇದಿಕೆಯಿಂದ ಇಳಿದು ಹೋದರು.
–ಇದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುರುಬ ಸಮಾಜದ ಜನ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಡೆದ ಘಟನೆ. ಆ ಮಹಿಳೆಗೆ ಇದು ನಿರೀಕ್ಷಿತ ಎನಿಸಿದ್ದರಬೇಕು; ಆದರೆ, ಮುತ್ತಿಕ್ಕಿಸಿಕೊಂಡ ಸಿಎಂ ಹಾಗೂ ನೆರೆದಿದ್ದವರಿಗೆ ಅನಿರೀಕ್ಷಿತವೇ ಆಗಿತ್ತು.
ಸಿದ್ದರಾಮಯ್ಯ ಅವರಿಗೆ ತುಂಬಿದ ಸಭೆಯ ಬಹಿರಂಗ ವೇದಿಕೆಯಲ್ಲಿ ಮುತ್ತು ನೀಡಿದ ಈ ಮಹಿಳೆ ಮೂಲತಃ ವರುಣಾ ಕ್ಷೇತ್ರದ ಗಿರಿಜಾ ಶ್ರೀನಿವಾಸ್, ಪ್ರಸ್ತುತ ತರೀಕೆರೆಯ ತಾಲ್ಲೂಕು ಪಂಚಾಯ್ತಿ ಸದಸ್ಯೆ.
ತಂದೆಗೆ ಮಗಳು ಮುತ್ತಿಟ್ಟಹಾಗೆ...
‘ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಚಿಕ್ಕಂದಿನಿಂದಲೂ ಅವರನ್ನು ನೋಡಿಕೊಂಡು ಬೆಳೆದೆ. ತಂದೆ, ತಾಯಿ ಎಲ್ಲರೂ ಸಿಎಂ ಅಭಿಮಾನಿಗಳು. ನಾನು ರಾಜಕೀಯಕ್ಕೆ ಬರಲು ಸಿದ್ದರಾಮಯ್ಯ ಅವರೇ ಕಾರಣ. ನಾನು ಅವರ ದೊಡ್ಡ ಅಭಿಮಾನಿ. ತಂದೆಗೆ ಮಗಳು ಮುತ್ತು ನೀಡಿದಹಾಗೆ ನಾನು ಸಿದ್ದರಾಮಯ್ಯ ಅವರಿಗೆ ಮುತ್ತು ನೀಡಿದ್ದೇನೆ. ನನ್ನ ಜನ್ಮದಲ್ಲಿ ಎಂದೂ ಮರೆಯಲಾಗದ ಕ್ಷಣ ಇದು’ ಎಂದು ಗಿರಿಜಾ ಶ್ರೀನಿವಾಸ್ ಅವರು ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.