ಬೆಂಗಳೂರು: ಹೆಬ್ಬಾಳ ಸಮೀಪದ ಶನೇಶ್ವರ ದೇವಸ್ಥಾನದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಮೃತರ ವಯಸ್ಸು ಸುಮಾರು 45 ವರ್ಷ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳದಲ್ಲಿ ಅವರ ಶವ ಪತ್ತೆಯಾಗಿದೆ. ಮೃತದೇಹದ ಮೇಲೆ ಟಾರ್ಪಲ್ ಹೊದಿಸಲಾಗಿತ್ತು. ಶವವನ್ನು ಕಂಡ ಸ್ಥಳೀಯರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು.
‘ಶವಕ್ಕೆ ಟಾರ್ಪಾಲ್ ಹೊದಿಸಿದ್ದರಿಂದ ವ್ಯಕ್ತಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ವೇಳೆ ಶವವನ್ನು ನೋಡಿದಾಗ ಅವರ ಸೊಂಟದ ಮೇಲೆ ವಾಹನದ ಚಕ್ರ ಹರಿದಿರುವುದು ಗೊತ್ತಾಯಿತು. ಹೀಗಾಗಿ ಪ್ರಕರಣದ ತನಿಖೆಯನ್ನು ಹೆಬ್ಬಾಳ ಸಂಚಾರ ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
‘ರಸ್ತೆ ದಾಟುವ ವೇಳೆ ಆ ವ್ಯಕ್ತಿ ಮೇಲೆ ಅಪರಿಚಿತ ವಾಹನ ಹರಿದಿರುವ ಸಾಧ್ಯತೆ ಇದೆ. ಸೋಮವಾರ ರಾತ್ರಿಯೇ ಈ ಘಟನೆ ನಡೆದಿದೆ. ವಾಹನ ಗುದ್ದಿಸಿದ ನಂತರ ಚಾಲಕ, ಶವವನ್ನು ರಸ್ತೆ ಬದಿ ಎಳೆದು ಹಾಕಿ ಪರಾರಿಯಾಗಿರಬಹುದು. ಟಾರ್ಪಾಲ್ ಹೊದಿಸಿದ್ದರಿಂದ ಮೃತದೇಹ ದಾರಿಹೋಕರ ಗಮನಕ್ಕೆ ಬಂದಂತಿಲ್ಲ. ಘಟನೆ ನಡೆದ ಸ್ಥಳದ ಸುತ್ತಮುತ್ತ ಯಾವುದೇ ಸಿ.ಸಿ ಕ್ಯಾಮೆರಾ ಇಲ್ಲ. ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಹೆಬ್ಬಾಳ ಸಂಚಾರ ಪೊಲೀಸರು ತಿಳಿಸಿದ್ದಾರೆ.
ನವವಿವಾಹಿತೆ ಆತ್ಮಹತ್ಯೆ
ಬೆಂಗಳೂರು: ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ (ಎನ್ಜಿವಿ) ವಸತಿ ಸಮುಚ್ಚಯದಲ್ಲಿ ರಶ್ಮಿ (23) ಎಂಬ ನವವಿವಾಹಿತೆ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತ್ಯಣ್ಣ ಎಂಬುವರ ಮಗಳಾದ ರಶ್ಮಿ ಅವರಿಗೆ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.
ಅವರ ಪತಿ ಮುರಳೀಧರ್ ಅವರು ಕುಟುಂಬ ಸದಸ್ಯರೊಂದಿಗೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರಿನಲ್ಲಿ ವಾಸವಾಗಿದ್ದಾರೆ. ಬಿ.ಇ ಓದಿರುವ ಮುರಳೀಧರ್, ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ರಶ್ಮಿ ಅವರು ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯಿಂದ ದೂರವಾಗಿ ತವರು ಮನೆಯಲ್ಲೇ ನೆಲೆಸಿದ್ದರು. ಪೋಷಕರು ಮಧ್ಯಾಹ್ನ ಹೊರಗೆ ಹೋಗಿದ್ದಾಗ ಅವರು ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ‘ಅಳಿಯ ಮುರಳೀಧರ್, ಆತನ ತಂದೆ ಮಾರನಾಯಕ್, ತಾಯಿ ಗಂಗಮ್ಮ, ಸಹೋದರಿಯರಾದ ಗೀತಾ ಮತ್ತು ಇಂದಿರಾ ಅವರು ವರದಕ್ಷಿಣೆಗಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು.
ಇದರಿಂದ ಬೇಸರಗೊಂಡಿದ್ದ ಮಗಳು ಪತಿಯಿಂದ ದೂರವಾಗಿ ಮನೆಗೆ ವಾಪಸ್ ಬಂದಿದ್ದಳು. ಅವಳ ಸಾವಿಗೆ ಅಳಿಯ ಮತ್ತು ಆತನ ಕುಟುಂಬದ ಸದಸ್ಯರೇ ಕಾರಣ’ ಎಂದು ಸತ್ಯಣ್ಣ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಮುರಳೀಧರ್ ಮತ್ತು ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.