ಝಬುವಾ, (ಪಿಟಿಐ): ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ನೇಮಕಾತಿ ಹಗರಣದ ತನಿಖಾ ವರದಿ ಮಾಡುತ್ತಿದ್ದ ಟಿ.ವಿ ಟುಡೆ ಸುದ್ದಿವಾಹಿನಿಯ ವರದಿಗಾರ ಅಕ್ಷಯಸಿಂಗ್ (38) ಶನಿವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದ 44 ಮಂದಿ ಇದುವರೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅಕ್ಷಯ್ 45ನೆಯವರು. ಹಗರಣ ಬೆಳಕಿಗೆ ಬಂದ ನಂತರ ಸಾವಿಗೀಡಾದ ಬಲಿಯಾದ ಮಹಿಳೆಯೊಬ್ಬರ ಪೋಷಕರ ಸಂದರ್ಶನಕ್ಕಾಗಿ ಅಕ್ಷಯ್ ಮಧ್ಯಾಹ್ನ ಮೇಘನಗರಕ್ಕೆ ತೆರಳಿದ್ದರು.
ಸಂದರ್ಶನ ಮುಗಿದ ನಂತರ ಅವರು ತಮ್ಮೊಂದಿಗೆ ಬಂದಿದ್ದ ವ್ಯಕ್ತಿಯನ್ನು ಕೆಲವು ದಾಖಲೆಗಳ ಜೆರಾಕ್ಸ್ ಪ್ರತಿ ತರಲು ಕಳುಹಿಸಿದರು. ಆತನಿಗಾಗಿ ಕಾಯುತ್ತ ಮನೆ ಹೊರಗೆ ನಿಂತ ಅವರ ಬಾಯಲ್ಲಿ ಏಕಾಏಕಿ ನೊರೆ ಕಾಣಿಸಿಕೊಂಡಿತು. ತಕ್ಷಣ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಕಾಂಗ್ರೆಸ್ ಒತ್ತಾಯ: ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.