ತುಮಕೂರು: ಅಂತರಸನಹಳ್ಳಿ ನೂತನ ಎಪಿಎಂಸಿ ಮಾರುಕಟ್ಟೆಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ವ್ಯಾಪಾರಿಗಳು ಸಿಪಿಎಂ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯಾವುದೇ ಸೌಕರ್ಯ ಕಲ್ಪಿಸಿಕೊಡದ ಮಹಾನಗರ ಪಾಲಿಕೆ, ಎಪಿಎಂಸಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರು, ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಆಟೊ, ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಾರುಕಟ್ಟೆ ಹಾದು ಹೋಗುವ ರಸ್ತೆಯಲ್ಲಿ ಪಾವಗಡ, ಮಧುಗಿರಿ ಬಸ್ಗಳು ಸಂಚರಿಸುತ್ತವೆ. ಹೊರ ರಾಜ್ಯಕ್ಕೆ ಹೋಗುವ ಲಾರಿಗಳ ಸಂಚಾರವೂ ಅಧಿಕವಾಗಿದೆ. ಆದರೆ ರಸ್ತೆ ಸರಿ ಇಲ್ಲದ ಕಾರಣ ಸಂಚಾರ ಕಷ್ಟಕರವಾಗುತ್ತಿದೆ. ರಸ್ತೆ ವಿಸ್ತರಣೆ ಮಾಡಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಸುಗಮ ಸಂಚಾರಕ್ಕಾಗಿ ಸಿಗ್ನಲ್ ಅಳವಡಿಸಬೇಕು ಎಂದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ನಗರ ಸಮಿತಿ ಸದಸ್ಯರಾದ ಷಣ್ಮುಖಪ್ಪ, ನರಸಿಂಹಮೂರ್ತಿ, ಮೈಲಾರಿ, ಡಿವೈಎಫ್ಐ ಮುಖಂಡ ನಾರಾಯಣಸ್ವಾಮಿ, ಸಿಐಟಿಯು ರಾಘವೇಂದ್ರ, ಶಿವಕುಮಾರ ಸ್ವಾಮಿ, ನಾಗೇಂದ್ರ, ಆನಂದ್, ಮಾರುಕಟ್ಟೆ ಹಮಾಲಿ ಕಾರ್ಮಿಕರ ಸಂಘದ ರಹಮತ್, ರಾಮಣ್ಣ, ಶಿವು, ಸಲೀಂ ಇತರರು ಇದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.