ಹೈದರಾಬಾದ್ (ಪಿಟಿಐ): ಹೈದರಾಬಾದ್ನ ವಿವಿಧೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಆರೋಪದ ಮೇಲೆ ಬಂಧಿಸಲಾಗಿರುವ 5 ಮಂದಿ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಸಿಬ್ಬಂದಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಎನ್ಐಎ ಪೊಲೀಸರು ಬುಧವಾರ ಹೈದರಾಬಾದ್ನ ವಿವಿಧೆಡೆ ದಾಳಿ ನಡೆಸಿ 5 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಅಲ್ಲದೇ, ಟೆಕಿ ಸೇರದಿಂತೆ 6 ಮಂದಿ ಮಂದಿಯನ್ನು ವಶಕ್ಕೆ ಪಡೆದಿದ್ದರು.
ಬಂಧಿತ ಶಂಕಿತ ಉಗ್ರರಾದ ಮಹಮದ್ ಇಬ್ರಾಹಿಂ ಅಲಿಯಾಸ್ ಇಬ್ಬು, ಹಬೀಬ್ ಮಹಮದ್ ಅಲಿಯಾಸ್ ಸರ್, ಮಹಮದ್ ಇಲಿಯಾಸ್, ಅಹಮದ್ ಅಲ್ ಅಮೂದಿ ಮತ್ತು ಮುಜಾಫರ್ ಹುಸೇನ್ ರಿಜ್ವಾನ್ ಅವರನ್ನು ನಾಂಪಲ್ಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 15 ದಿನ ವಶಕ್ಕೆ ನಿಡುವಂತೆ ಎನ್ಐಎ ಸಿಬ್ಬಂದಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.
ದೇವಸ್ಥಾನ ಸ್ಫೋಟಕ್ಕೆ ಸಂಚು: ಶಂಕಿತ ಉಗ್ರರು ಚಾರ್ಮಿನಾರ್ ಬಳಿಯ ಭಾಗ್ಯಲಕ್ಷ್ಮಿ ದೇವಾಲಯವನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ಸಿಬ್ಬಂದಿ ನಡೆಸಿದ ವಿಚಾರಣೆಯಿಂದ ತಿಳಿದು ಬಂದಿದೆ.
ಬಿಗಿ ಬಂದೋಬಸ್ತ್: ಶಂಕಿತ ಉಗ್ರರು ವಿವಿಧ ಕಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಸಂಗತಿ ಬಯಲಾಗುತ್ತಿದ್ದಂತೆ ಹೈದರಾಬಾದ್ನ ರಾಜೀವ್ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಶಂಕಿತರೆಲ್ಲರೂ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಬಗ್ಗೆ ಸಹಾನುಭೂತಿ ಹೊಂದಿದ್ದರು. ಎನ್ಐಎ ಸಿಬ್ಬಂದಿ ಶಂಕಿತ ಉಗ್ರರಿಂದ ಎರಡು ಪಿಸ್ತೂಲ್, ಏರ್ಗನ್, 6 ಲ್ಯಾಪ್ಟಾಪ್, 40 ಮೊಬೈಲ್, 32 ಸಿಮ್, ಹಾರ್ಡ್ಡಿಸ್ಕ್, ಮೆಮೋರಿ ಕಾರ್ಡ್ಗಳನ್ನು ಜಪ್ತಿ ಮಾಡಿದ್ದಾರೆ.