ನವದೆಹಲಿ (ಪಿಟಿಐ): ವಾರಾಣಸಿ ಮತ್ತು ಹರಿದ್ವಾರದಂತಹ ನಗರಗಳಲ್ಲಿ ನದಿ ತಟದ ಮೇಲೆ ಶವಗಳ ಅಂತ್ಯಕ್ರಿಯೆ ನಡೆಸುವುದರಿಂದ ಗಂಗಾ ನದಿಯ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಮಾಲಿನ್ಯ ಕಡಿಮೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದೆ.
ಸರ್ಕಾರದ ಈ ಕ್ರಮವನ್ನು ಸಾಧು, ಸಂತರು ಬೆಂಬಲಿಸಿದ್ದಾರೆ ಎಂದು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
‘ಶವ ಸಂಸ್ಕಾರಕ್ಕಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ನಾವು ಸ್ವೀಕರಿಸುತ್ತೇವೆ ಎಂದು ಸಾಧು, ಸಂತರು ಹೇಳಿದ್ದಾರೆ. ಹಾಗಾಗಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ತಂತ್ರಜ್ಞರ ಸಮಿತಿ ರಚನೆ ಮಾಡಲಾಗಿದೆ’ ಎಂದರು.
ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ನ ಸಂಶೋಧನಾ ಸಂಸ್ಥೆಯ ನಿರ್ದೇಶಕರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ, ಐಐಟಿ ಕಾನ್ಪುರದ ಹಿರಿಯ ಪ್ರೊಫೆಸರ್ ಸಮಿತಿಯಲ್ಲಿದ್ದಾರೆ ಎಂದು ಉಮಾಭಾರತಿ ತಿಳಿಸಿದರು.
ನದಿ ಮಲಿನಗೊಳ್ಳದಂತೆ ಮಾಡುವ ಎಲ್ಲ ತಂತ್ರಜ್ಞಾಗಳನ್ನೂ ಸಮಿತಿ ಪರಿಶೀಲಿಸಲಿದೆ. ನದಿಯ ಮಾಲಿನ್ಯ ತಡೆಯಲು ಅಲ್ಪಾವಧಿಯ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
‘ನದಿಯಲ್ಲಿ ಸೇರುವ ಪೂಜೆಯ ಸಾಮಗ್ರಿಗಳು ದೊಡ್ಡ ಕೊಡುಗೆ ನೀಡುತ್ತಿದೆ. ಈ ಬಗ್ಗೆಯೂ ಸರ್ಕಾರ ಕಾಳಜಿ ಹೊಂದಿದೆ’ ಎಂದು ಅವರು ನುಡಿದರು.
‘ಕಲುಷಿತ ನೀರು ನದಿಗೆ ಬಿಡದೆ ಅದನ್ನು ಕೃಷಿ ಮತ್ತು ಇತರ ಉದ್ದೇಶಕ್ಕೆ ಬಳಸಬೇಕು ಎಂದು ನಿರ್ಧರಿಸಲಾಗಿದೆ. ಈ ಕುರಿತು ಅ. 8ರಂದು ಕೈಗಾರಿಕಾ ಪ್ರತಿನಿಧಿಗಳ ಸಭೆ ಕರೆಯಲಾಗಿದೆ’ ಎಂದು ಅವರು ಹೇಳಿದರು.