ನವದೆಹಲಿ (ಪಿಟಿಐ): ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಸಿಬಿಐ ಸೋಮವಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.
ಸಿಬಿಐನ ಜಂಟಿ ನಿರ್ದೇಶಕ ರಾಜೀವ್ ಸಿಂಗ್ ನೇತೃತ್ವದ ಎಸ್ಐಟಿಯಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯ ಭಾರತ ಮತ್ತು ಬಿಹಾರದ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿರುತ್ತಾರೆ ಎಂದು ಸಿಬಿಐ ವಕ್ತಾರ ಕಾಂಚನ್ ಪ್ರಸಾದ್ ತಿಳಿಸಿದ್ದಾರೆ.
‘ಹಗರಣದ ಸಂಬಂಧ ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ಸಿಬಿಐ ಅಗತ್ಯ ದಾಖಲೆಗಳನ್ನು ಕಲೆ ಹಾಕಲಿದೆ. ದೊಡ್ಡ ಸಂಚು ನಡೆದಿರುವ ಸಾಧ್ಯತೆಯಿಂದಾಗಿ ವಿಶಾಲ ವ್ಯಾಪ್ತಿಯಲ್ಲಿ ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪಾತ್ರದ ಕುರಿತಾಗಿಯೂ ತನಿಖೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.
ಹಗರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ಸಿಬಿಐ ರಚಿಸಬೇಕು. ತನಿಖಾ ಸಂಸ್ಥೆಗೆ ಸಂಬಂಧಿಸಿದ ರಾಜ್ಯಗಳು ಸಹಕಾರ ನೀಡಬೇಕು ಮತ್ತು ಸೆಬಿ ಹಾಗೂ ಆರ್ಬಿಐ ಪಾತ್ರದ ಕುರಿತು ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಈಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿ ತೀರ್ಪು ನೀಡಿತ್ತು.
ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಮತ್ತು ಬಿಹಾರ ರಾಜ್ಯದವರು ಶಾರದಾ ಚಿಟ್ ಫಂಡ್ನಲ್ಲಿ ಹೂಡಿದ್ದ ₨10,000 ಕೋಟಿ ವಂಚಿಸಿದ ಪ್ರಕರಣ ಇದಾಗಿದೆ.