ಚೆನ್ನೈ (ಪಿಟಿಐ): ಮುಖ್ಯಮಂತ್ರಿಯಾಗಿ ಅಧಿಕಾರ-ದಲ್ಲಿ ಇರುವಾಗಲೇ ಜೈಲು ಶಿಕ್ಷೆಗೆ ಗುರಿಯಾದ ರಾಷ್ಟ್ರದ ಮೊದಲ ಮುಖ್ಯಮಂತ್ರಿ ಎಂಬ ಕಪ್ಪುಚುಕ್ಕೆ ಜಯ-ಲಲಿತಾ ಅವರಿಗೆ ಅಂಟಿ-ಕೊಂಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ-ಯಡಿ (ಪಿಸಿಎ) ಜೈಲು ಶಿಕ್ಷೆಗೆ ಗುರಿ-ಯಾಗಿರುವ ಜಯಾ ಅವರ ಮುಂದೆ ಈಗಿರುವ ತಕ್ಷಣದ ಮಾರ್ಗೋಪಾಯ-ವೆಂದರೆ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದು. ಆನಂತರವಷ್ಟೇ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಹಾಕುವ ಬಗ್ಗೆ ಯೋಚಿಸಬಹುದು.
ಜಯಲಲಿತಾ ಅವರು ಜೈಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಜನಪ್ರತಿನಿಧಿಯಾಗಿದ್ದಾರೆ. ಈ ಮುನ್ನ ಡಿಎಂಕೆ ರಾಜ್ಯಸಭಾ ಸದಸ್ಯ ಟಿ.ಎಂ.-ಸೆಲ್ವಗಣಪತಿ ಅವರು ಹಗರಣ-ವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಈ ಮುಂಚಿನ ಕಾನೂನಿನ ಪ್ರಕಾರ ಶಾಸಕರು ಅಥವಾ ಸಂಸದರು ಅಪರಾಧಿಗಳೆಂದು ತೀರ್ಪು -ಪ್ರಕಟವಾದ ನಂತರ ಅವರಿಗೆ ಮೇಲ್ಮನವಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶವಿತ್ತು. ಆದರೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಜನಪ್ರತಿನಿಧಿ ಕಾಯಿದೆ-ಯಲ್ಲಿದ್ದ ಈ ಪರಿಚ್ಛೇದವನ್ನು ರದ್ದುಗೊಳಿಸಿತ್ತು.
ಸಂಸದರು ಅಥವಾ ಶಾಸಕರಾದವರು ಕ್ರಿಮಿನಲ್ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ ಅವರ ಕ್ಷೇತ್ರ ಸದಸ್ಯತ್ವ ತಕ್ಷಣವೇ ಅನರ್ಹಗೊಳ್ಳುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಜಯಲಲಿತಾ ಅವರು ಎಐಎಡಿ-ಎಂಕೆಯನ್ನು 2011ರಿಂದಲೂ ಯಶಸ್ವಿ-ಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
2011ರ ವಿಧಾನಸಭಾ ಚುನಾ-ವಣೆ-ಯಲ್ಲಿ ಗೆದ್ದ ಮೇಲೆ, ಅವರು ಹಿನ್ನಡೆ-ಯನ್ನೇ ಕಂಡಿಲ್ಲ. ಉಪ ಚುನಾ-ವಣೆಗಳು ಸೇರಿದಂತೆ ಹಲವು ಚುನಾ-ವಣೆಗಳಲ್ಲಿ ಪಕ್ಷ ಜಯ ದಾಖಲಿಸು-ತ್ತಲೇ ಬಂದಿದೆ. 2016ರಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಜಯಾ ಅವರ ಉತ್ಸಾಹಕ್ಕೆ ನ್ಯಾಯಾಲಯದ ತೀರ್ಪು ತಡೆಯೊಡ್ಡಿದೆ.-
ಹೊಸ ಸಿ.ಎಂ ಯಾರು?
ತಮಿಳುನಾಡು ಮುಖ್ಯಮಂತ್ರಿ ಜಯ-ಲಲಿತಾ ಅವರು ಜೈಲು ಶಿಕ್ಷೆಗೆ ಗುರಿ-ಯಾಗುತ್ತಿದ್ದಂತೆಯೇ ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡ-ಬೇಕು ಎಂಬ ಚಿಂತನೆ ಬಿರುಸು ಪಡೆ-ದಿದೆ. ಜಯಾ ಅವರ ಸಂಪುಟ ಸಹೋ-ದ್ಯೋಗಿಗಳಾದ ಹಣಕಾಸು ಸಚಿವ ಒ.ಪನ್ನೀರಸೆಲ್ವಂ, ವಿದ್ಯುತ್ ಸಚಿವ ನಾಥಂ ವಿಶ್ವನಾಥನ್ , ಸಾರಿಗೆ ಸಚಿವ ವಿ.ಸೆಂಥಿಲ್ ಬಾಲಾಜಿ ಹಾಗೂ ರಾಜ್ಯ ಸರ್ಕಾರದ ಸಮಾಲೋಚಕಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಹೆಸರುಗಳು ಕೇಳಿಬರುತ್ತಿವೆ.
ಕುಸಿದು ಕುಳಿತ ಜಯಾ
ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದು ಕಟಕಟೆಯಲ್ಲಿ ನಿಲ್ಲುವಾಗ ಜಯಲಲಿತಾ ಅವರು ಎಂದಿನಂತೆಯೇ ಇದ್ದರು. ಆದರೆ, ನ್ಯಾಯಾಧೀಶರು ‘ದೋಷಿ’ ಎಂಬ ತೀರ್ಮಾನ ಪ್ರಕಟಿಸುತ್ತಿದ್ದಂತೆ ಕುಸಿದು ಕುಳಿತರು. ‘ಸ್ವಲ್ಪ ಸುಧಾರಿಸಿಕೊಳ್ಳಿ’ ಎಂದು ಸಲಹೆ ನೀಡಿದ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಹೊರಬಂದ ಜಯಲಲಿತಾ ಅವರು ವಾಹನದಲ್ಲಿ 15 ನಿಮಿಷ ವಿಶ್ರಾಂತಿ ಪಡೆದರು. 1 ಗಂಟೆಗೆ ಪುನಃ ಕಲಾಪ ಆರಂಭವಾದಾಗ ನ್ಯಾಯಾಧೀಶರು, ‘ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಮಧ್ಯಾಹ್ನ ಮತ್ತೆ ನ್ಯಾಯಾಲಯದ ಕಟಕಟೆಗೆ ಬಂದಾಗ ಜಯಲಲಿತಾ ಅವರಲ್ಲಿ ದುಗುಡ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಜಯಲಲಿತಾ ಪರ ವಕೀಲರು, ತಮ್ಮ ಕಕ್ಷಿದಾರರು ಜನಪ್ರಿಯ ಮುಖ್ಯಮಂತ್ರಿಗಳಾಗಿ ಜನಕಲ್ಯಾಣಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಬೇಕು ಮತ್ತು ದೈಹಿಕವಾಗಿ ಅವರ ಆರೋಗ್ಯ ಕ್ಷೀಣಿಸಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕೆಂದು ವಿನಂತಿಸಿದರು. ಆದರೆ ಇದಕ್ಕೊಪ್ಪದ ಪ್ರಾಸಿಕ್ಯೂಷನ್ ಪರ ವಕೀಲರು, ಆರೋಪಿಗಳ ಕೃತ್ಯ ಗುರುತರವಾಗಿರುವುದರಿಂದ ಕಠಿಣ ಶಿಕ್ಷೆಯನ್ನೇ ವಿಧಿಸಬೇಕೆಂದು ಬಲವಾಗಿ ವಾದ ಮಂಡಿಸಿದರು. ಅಂತಿಮವಾಗಿ ಸಂಜೆ 5.20ರ ವೇಳೆಗೆ ಶಿಕ್ಷೆ ಪ್ರಕಟವಾಯಿತು. ಈ ಕ್ಷಣದಲ್ಲಿ ಜಯಾ ಮತ್ತೆ ಕುಸಿದು ಕುಳಿತರು.
ಸುದೀರ್ಘ ಹಿನ್ನೋಟ
*1996: ಜಯಲಲಿತಾ ವಿರುದ್ಧ ಜನತಾ ಪಕ್ಷದ ಅಂದಿನ ನಾಯಕ ಸುಬ್ರಮಣಿಯನ್ ಸ್ವಾಮಿ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದರು. 1991ರಿಂದ 96ರವರೆಗೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಕ್ರಮವಾಗಿ ₨ 66.65 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಸ್ವಾಮಿ ಆರೋಪ ಮಾಡಿದ್ದರು.
*ಡಿಸೆಂಬರ್ 7, 1996: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ. ಜಯಲಲಿತಾ ಮತ್ತು ಅವರ ಮೂವರು ಆಪ್ತರ ಬಂಧನ.
*1997: ಜಯಾ ಹಾಗೂ ಮೂವರು ಆಪ್ತರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ.
*ಜೂನ್ 4, 1997: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ‘ಬಿ’ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1998ರ 13(2), 13 (1)(ಇ) ಅಡಿ ಜಯಾ ಹಾಗೂ ಮೂವರು ಆಪ್ತರ ವಿರುದ್ಧ ಆರೋಪಪಟ್ಟಿ.
*ಅಕ್ಟೋಬರ್ 1, 1997: ಜಯಲಲಿತಾ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್.
*ಆಗಸ್ಟ್, 2000: ಮುಂದುವರಿದ ವಿಚಾರಣೆ, 250 ಸಾಕ್ಷಿಗಳ ವಿಚಾರಣೆ, 10 ಸಾಕ್ಷಿಗಳ ಹೇಳಿಕೆ ದಾಖಲು ಬಾಕಿ.
*ಅಕ್ಟೋಬರ್, 2000: ತಮಿಳುನಾಡು ಸಣ್ಣ ಕೈಗಾರಿಕಾ ನಿಗಮ ಹಗರಣದಲ್ಲಿ ಜಯಾ ಮೇಲಿನ ಆರೋಪ ಸಾಬೀತು.
*ಮೇ, 2001: ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಭಾರಿ ಬಹುಮತ. ಸಣ್ಣ ಕೈಗಾರಿಕಾ ನಿಗಮ ಹಗರಣದಲ್ಲಿ ಶಿಕ್ಷೆಗೆ ಒಳಗಾದ ಜಯಾ ಮತ್ತೆ ಮುಖ್ಯಮಂತ್ರಿಯಾಗುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ. ನೇಮಕ ರದ್ದುಗೊಳಿಸಿದ ಸುಪ್ರೀಂ ಕೋರ್ಟ್.
*ಫೆಬ್ರುವರಿ 21, 2002: ಉಪ ಚುನಾವಣೆಯಲ್ಲಿ ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
*ಮೂವರು ಸರ್ಕಾರಿ ಅಭಿಯೋಜಕರ ರಾಜೀನಾಮೆ. ಪ್ರತಿಕೂಲ ಹೇಳಿಕೆ ನೀಡಿದ ಸಾಕ್ಷಿಗಳು.
*2003: ಜಯಲಲಿತಾ ಮುಖ್ಯಮಂತ್ರಿಯಾಗಿರುವ ಕಾರಣ ತಮಿಳುನಾಡಿನಲ್ಲಿ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಹೀಗಾಗಿ ವಿಚಾರಣೆಯನ್ನು ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅಂಬಳಗನ್.
*ನವೆಂಬರ್ 18, 2003: ಜಯಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ.
*ಫೆಬ್ರುವರಿ 19, 2005: ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರನ್ನು ಪ್ರಕರಣದ ವಿಶೇಷ ಸರ್ಕಾರಿ ಪ್ರಾಸಿಕ್ಯೂಟರ್ (ಎಸ್ಪಿಪಿ) ನೇಮಕ ಮಾಡಿದ ಕರ್ನಾಟಕ ಸರ್ಕಾರ.
*ಅಕ್ಟೋಬರ್/ನವೆಂಬರ್, 2011: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ 1,339 ಪ್ರಶ್ನೆಗಳಿಗೆ ಉತ್ತರಿಸಿದ ಜಯಾ.
*ಆಗಸ್ಟ್, 2012: ರಾಜೀನಾಮೆ ನೀಡಿದ ಎಸ್ಪಿಪಿ ಬಿ.ವಿ. ಆಚಾರ್ಯ.
*ಫೆಬ್ರುವರಿ 2, 2013: ಹೊಸ ಎಸ್ಪಿಪಿಯಾಗಿ ಭವಾನಿ ಸಿಂಗ್ ನೇಮಕ ಮಾಡಿದ ಕರ್ನಾಟಕ ಸರ್ಕಾರ.
*ಆಗಸ್ಟ್ 26, 2013: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಮನಕ್ಕೂ ತರದೆ ಮತ್ತು ಯಾವ ಕಾರಣ ಇಲ್ಲದೇ ಭವಾನಿ ಸಿಂಗ್ ನೇಮಕ ರದ್ದುಗೊಳಿಸಲು ಅಧಿಸೂಚನೆ ಹೊರಡಿಸಿದ ಸರ್ಕಾರ.
*ಸೆಪ್ಟೆಂಬರ್ 30, 2013: ಕರ್ನಾಟಕ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದ ಸುಪ್ರೀಂಕೋರ್ಟ್.
*ಡಿಸೆಂಬರ್ 12, 2013: ಮತ್ತೆ ವಿಶೇಷ ಕೋರ್ಟ್ ಮೊರೆ ಹೋದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅಂಬಳಗನ್. 1997ರಲ್ಲಿ ಜಯಲಲಿತಾ ಅವರಿಂದ ವಶಪಡಿಸಿಕೊಂಡು ಚೆನ್ನೈ ಆರ್ಬಿಐ ಖಜಾನೆಯಲ್ಲಿ ಇಡಲಾಗಿದ್ದ ಚಿನ್ನಾಭರಣ, ಒಡವೆ ಹಾಗೂ ಇತರ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲು ಆದೇಶ.
*ಫೆಬ್ರುವರಿ 28, 2014: ಜಯಾ ಅವರಿಂದ ವಶಪಡಿಸಿಕೊಳ್ಳಲಾದ ಬೆಳ್ಳಿಯ ಆಭರಣಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ಎಸ್ಪಿಪಿ ಸಲ್ಲಿಸಿದ್ದ ಅರ್ಜಿ ವಜಾ. ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಅರ್ಜಿ, ಎಸ್ಪಿಪಿ ಭವಾನಿ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು.
*ಮಾರ್ಚ್ 14/15, 2014: ಅನಾರೋಗ್ಯದ ನೆಪವೊಡ್ಡಿ ಅಂತಿಮ ವಿಚಾರಣೆಗೆ ಹಾಜರಾಗದ ಸಿಂಗ್ ಅವರಿಗೆ ಒಂದು ದಿನದ ವೇತನವನ್ನು ದಂಡ ವಿಧಿಸಿದ ನ್ಯಾಯಾಲಯ.
*ಮಾರ್ಚ್ 18, 2014: ದಂಡ ವಿಧಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಂಗ್.
*ಮಾರ್ಚ್ 21, 2014: ವಿಶೇಷ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್, ದಂಡ ವಿಧಿಸಿದ ಕ್ರಮವನ್ನು ಸರಿ ಎಂದು ಹೇಳಿತು.
*ಆಗಸ್ಟ್ 28, 2014: ಜಯಾ ವಿರುದ್ಧದ 18 ವರ್ಷ ಹಳೆಯದಾದ ಅಕ್ರಮ ಆಸ್ತಿ ಪ್ರಕರಣ ವಿಚಾರಣೆ ಅಂತಿಮ ಘಟ್ಟಕ್ಕೆ. ಸೆ.20ಕ್ಕೆ ಅಂತಿಮ ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ. ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಎಲ್ಲ ನಾಲ್ವರು ಆರೋಪಿಗಳು ಅಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಎಂದು ಸೂಚನೆ.
*ಸೆ.6, 2014: ಸೆ.27ರಂದು ಅಂತಿಮ ಆದೇಶ ಪ್ರಕಟಿಸುವುದಾಗಿ ಪ್ರಕಟಣೆ.
*ಸೆ.27, 2014: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಮುಖ್ಯಮಂತ್ರಿ ಜಯಲಲಿತಾ ಹಾಗೂ ಮೂವರು ಆಪ್ತರ ವಿರುದ್ಧದ ಆರೋಪ ಸಾಬೀತು. ನಾಲ್ಕು ವರ್ಷ ಜೈಲು ಹಾಗೂ ₨ 100 ಕೋಟಿ ದಂಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.