‘ಕಳ್ಳುಬಳ್ಳಿ’ ಅಂಕಣದಲ್ಲಿ (ಪ್ರ.ವಾ., ಜುಲೈ 22) ‘ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’ ಶೀರ್ಷಿಕೆಯ ಲೇಖನದಲ್ಲಿ ವಸು ಮಳಲಿ ಅವರು ಪ್ರಸ್ತಾಪಿಸಿರುವ ಕೆಲವು ಸಂಗತಿಗಳನ್ನು ಸಮಕಾಲೀನ ನೆಲೆಗಳಿಗೆ ತಂದು ಚರ್ಚೆಯನ್ನು ಇನ್ನೂ ವಿಸ್ತಾರವಾಗಿ, ಸೂಕ್ಷ್ಮವಾಗಿ ಬೆಳೆಸಬಹುದೆಂಬ ಆಸೆಯಿಂದ ಇನ್ನೊಂದಿಷ್ಟು ನೋಟಗಳನ್ನು ಓದುಗರ ಮುಂದೆ ಮಂಡಿಸಬಯಸುತ್ತೇನೆ.
1) ಎಂ.ಎನ್. ಶ್ರೀನಿವಾಸ್ ಅವರ ‘ಸಂಸ್ಕೃತೀಕರಣ’ದ ಕಲ್ಪನೆಯನ್ನು ಸಮಾಜಶಾಸ್ತ್ರಜ್ಞರು ಪ್ರಶ್ನಿಸಿ ಕೆಲವು ದಶಕಗಳೇ ಕಳೆದಿವೆ. ಅಲ್ಲದೆ ಶ್ರೀನಿವಾಸ್ ಈ ಪರಿಕಲ್ಪನೆಯನ್ನು ಮಂಡಿಸಿದಾಗ ಅವರ ಮನಸ್ಸಿನಲ್ಲಿದ್ದುದು ಕೊಡವ ಸಮಾಜದ ಮತ್ತು ಹಳೆ ಮೈಸೂರಿನ ಮಧ್ಯಮ ಜಾತಿಗಳು ಮಾತ್ರ. ಆ ಕಾಲಕ್ಕೆ ಅದು ಸರಿಯಿತ್ತು. ಏಕೆಂದರೆ ಮಧ್ಯಮ ಜಾತಿಗಳು ಮಾತ್ರ ಸಾಮಾಜಿಕ ಚಲನೆಯಲ್ಲಿ ಏರುಗತಿಯನ್ನು ಮೊದಲ–ಎರಡನೆಯ ತಲೆಮಾರಿನಲ್ಲಿ ಅನುಭವಿಸುತ್ತಿದ್ದವು. ಈಗ ಹಿಂದೂ ಸಮಾಜದ ಹೆಚ್ಚಿನ ಸ್ತರದ ಸಮುದಾಯಗಳು ಸಾಮಾಜಿಕ ಬದಲಾವಣೆಯನ್ನು ಕಂಡಿವೆ, ನಿರ್ದೇಶಿಸುತ್ತಿವೆ. ಅಲ್ಲದೆ ಒಂದು ಸಮುದಾಯದ ಮೊದಲ ಅಥವಾ ಎರಡನೆಯ ಶಿಕ್ಷಿತ ತಲೆಮಾರು ಸಂಸ್ಕೃತೀಕರಣ. ಸಾಮಾಜಿಕ ಬದಲಾವಣೆಯನ್ನು ಎದುರಿಸುವ ಶೈಲಿಗೂ ನಂತರದ ತಲೆಮಾರುಗಳು ಎದುರಿಸುವ ಶೈಲಿಗೂ ತುಂಬಾ ವ್ಯತ್ಯಾಸವಿರುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ನಂತರದ ತಲೆಮಾರುಗಳ ಆಯ್ಕೆ ಹೆಚ್ಚು ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಸ್ವಾಭಿಮಾನದಿಂದ ಕೂಡಿರುತ್ತದೆ ಮತ್ತು ಸಾಕಷ್ಟು ಸ್ವಮಗ್ನವೂ ಆಗಿರುತ್ತದೆ. ಈ ತಲೆಮಾರುಗಳು ಬದಲಾವಣೆಗಳನ್ನು ಎದುರಿಸುವಾಗ, ಅನುಭವಿಸುವಾಗ ‘ಸಂಸ್ಕೃತೀಕರಣ’ ‘ಬ್ರಾಹ್ಮಣೀಕರಣ’ದ ಮಾದರಿಯೊಂದೇ ಅದರ ಮುಂದಿರುವುದಿಲ್ಲ.
ಹಿಂದೂ ಧರ್ಮದ ಹೊರಗಿರುವ ಧರ್ಮದ ಮಾದರಿಗಳು, ಪಾಶ್ಚಾತ್ಯೀಕರಣ ಮತ್ತು ಆಧುನೀಕರಣದ ಮಾದರಿಗಳಿಗೂ ಸ್ಪಂದಿಸುತ್ತಾ ಬೇರೆ ಬೇರೆ ಮಾದರಿಗಳಿಂದ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಯಾವುದೇ ಮಾದರಿಯನ್ನು ಇಡಿಯಾಗಿ ತಿರಸ್ಕರಿಸುವುದಿಲ್ಲ ಮತ್ತು ಇಡಿಯಾಗಿ ಒಪ್ಪಿಕೊಳ್ಳುವುದಿಲ್ಲ. ಸಮಕಾಲೀನ ಮತ್ತು ದೈನಿಕ ಬದುಕಿನ ನೆಲೆಗಳಿಂದ ಇದು ಲೌಕಿಕ ಜಾಣ್ಮೆ ತುಂಬಿದ ಆಯ್ಕೆ. ಆದರೆ ನಾವು ಚರ್ಚಿಸುವಾಗ, ಅಧ್ಯಯನ ಮಾಡುವಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ ಒಂದು ಮಾದರಿಯನ್ನು ಇಡಿಯಾಗಿ ಒಪ್ಪುತ್ತದೆ ಇಲ್ಲ ತಿರಸ್ಕರಿಸುತ್ತದೆ ಎಂದು ತಪ್ಪಾಗಿ ಭಾವಿಸಿ ಅತಿರೇಕದ ತೀರ್ಮಾನಗಳಿಗೆ ಬರುತ್ತೇವೆ. ಕೊಡವ ಸಮಾಜದ ಉದಾಹರಣೆಯಿಂದಲೇ ಹೇಳುವುದಾದರೆ ಇವರನ್ನು ಸಂಸ್ಕೃತೀಕರಣಗೊಳಿಸಿದವರು, ಇಲ್ಲವೇ ಹಿಂದೂ ಧರ್ಮದ ವ್ಯಾಪ್ತಿಯೊಳಗೆ ತಂದವರು ಹಾವೇರಿಯ ವೀರಶೈವ ರಾಜಮನೆತನದವರು.
ಚಿಕವೀರರಾಜೇಂದ್ರನ ಪತನದ ನಂತರ ಈ ಜನಾಂಗವು ಇಸ್ಲಾಂಗಾಗಲೀ, ಕ್ರೈಸ್ತ ಧರ್ಮಕ್ಕಾಗಲೀ ಪರಿವರ್ತನೆಗೊಳ್ಳಲು ನಿರಾಕರಿಸಿತು. ಆದರೆ ಆಂಗ್ಲರು ಶಿಕ್ಷಣ, ಸಾಮಾಜಿಕ ಜೀವನದಲ್ಲಿ ತಂದ ಎಲ್ಲ ಬದಲಾವಣೆಗಳನ್ನು ಮನಸಾರೆ ತನಗೆ ಬೇಕಾದಷ್ಟು ಒಪ್ಪಿಕೊಂಡು ಪ್ರಗತಿಪರವಾಯಿತು. ಉತ್ತರ ಭಾರತದಲ್ಲಿ ಆರ್ಯ ಸಮಾಜದವರು ಕೂಡ ಇದೇ ರೀತಿಯ ಮಾದರಿಯನ್ನೇ ಅನುಸರಿಸಿದರು. ಈವತ್ತಿನ ಪರಿಸ್ಥಿತಿ ಇನ್ನೂ ಸಂಕೀರ್ಣವಾಗಿದೆ. ಸಂಸ್ಕೃತೀಕರಣ, ಆಧುನಿಕತೆ, ಪಶ್ಚಿಮದ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಪ್ರತಿಯೊಂದು ಜಾತಿಯೂ ತನಗೆ ಬೇಕಾದ ಸ್ತರದಲ್ಲಿ ಮಾತ್ರ ಒಳಗೊಳ್ಳಲು ಪ್ರಯತ್ನಿಸುತ್ತದೆ.
ಈ ಸಂಕೀರ್ಣತೆ ಮತ್ತು ವೈವಿಧ್ಯವನ್ನು ನಾವು ಒಪ್ಪದೆ ಹೋದರೆ ಈ ಎಲ್ಲ ಪರಿಕಲ್ಪನೆಗಳು ಏಕಶಿಲೆಯಾಕಾರದವು, ನಮ್ಮ ಪ್ರತಿಕ್ರಿಯೆ ಕೂಡ ಏಕತ್ರದ ಸ್ತರದಲ್ಲಿರುತ್ತದೆ ಎಂಬ ತಪ್ಪು ತೀರ್ಮಾನಕ್ಕೆ ಬರುತ್ತೇವೆ. ಈ ನೋಟವು ಬ್ರಾಹ್ಮಣೇತರ ಮತ್ತು ಹಿಂದುಳಿದ ಜಾತಿಗಳಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮುಂದುವರಿದ ಸಮುದಾಯ-ದವರು ಕೂಡ ಬೇರೆ ಬೇರೆ ರೀತಿಯ ಪರಿಕಲ್ಪನೆ–ವಿದ್ಯಮಾನಗಳನ್ನು ತಮ್ಮ ಬದುಕಿನಲ್ಲಿ ದೈನಿಕ-ದಲ್ಲಿ ಎದುರಿಸಲೇಬೇಕಾಗುತ್ತದೆ.
ಒಂದೇ ವ್ಯತ್ಯಾಸವೆಂದರೆ ಈ ಸಮುದಾಯಗಳು ತಾವು ಈಗಾಗಲೇ ಸಂಸ್ಕೃತೀಕರಣಕ್ಕೆ ಒಳಗಾಗಿಬಿಟ್ಟಿದ್ದೇವೆ ಎಂದು ನಂಬಿಬಿಟ್ಟಿರುವುದರಿಂದ ತಮ್ಮ ಆಯ್ಕೆಯನ್ನು ಆಧುನಿಕತೆ, ಪಾಶ್ಚಾತ್ಯೀಕರಣ, ಜಾಗತೀಕರಣದ ನೆಲೆಗಳೊಳಗೇ ಮಾಡಲು ಪ್ರಯತ್ನಿಸುತ್ತವೆ. ಇದೂ ಒಂದು ರೀತಿಯ ತಪ್ಪು ಆಯ್ಕೆಯೇ. ಸಂಸ್ಕೃತೀಕರಣದ ನೆಲೆಗಳನ್ನು ಪ್ರಶ್ನಿಸದೆ ಹೋಗಿದ್ದರೆ ವಿಧವಾವಿವಾಹ, ಮಹಿಳಾ ಶಿಕ್ಷಣ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳು ಮಂಚೂಣಿಗೇ ಬರುತ್ತಿರಲಿಲ್ಲ.
2) ಸಮುದಾಯಗಳು ಬದಲಾವಣೆಗಳನ್ನು ಬಯಸುವಾಗ, ಎದುರಿಸುವಾಗ ಮೂಡುವ ಅನುಭವಗಳನ್ನು, ಒಳಬದುಕಿನ ವಿವರಗಳನ್ನು ಯಾವ ವಿನ್ಯಾಸದಲ್ಲಿ ಗ್ರಹಿಸಬೇಕು ಎನ್ನುವುದಕ್ಕೆ ಎಂ.ಎನ್. ಶ್ರೀನಿವಾಸ್ ಮತ್ತು ಶಾಸನದ ವಿವರಗಳು ಮಾತ್ರ ಮಾದರಿಗಳಾಗಬಾರದು. ನಾವು ಸರಿಯಾಗಿ ಪೂರ್ಣವಾಗಿ ಗ್ರಹಿಸದೆ ಹೋದ ಕುವೆಂಪು–ಕಾರಂತರ ಕೆಲವು ಕಾದಂಬರಿಗಳು ಕೂಡ ಮತ್ತೊಂದು ಮಾದರಿಯನ್ನು ಮಂಡಿಸುತ್ತವೆ.
ಈ ಮಾದರಿಯ ವಿನ್ಯಾಸವು ಸಂಶೋಧಕರು, ಚರಿತ್ರೆಕಾರರು ಮಂಡಿಸುವ ವಿನ್ಯಾಸಗಳಿಗಿಂತ ಭಿನ್ನವಾಗಿದೆ, ವಿಸ್ತಾರವಾಗಿದೆ. ಕನ್ನಡದ ಸಂದರ್ಭದಲ್ಲಂತೂ ಇವರ ಕೃತಿಗಳು ಈ ಪ್ರಶ್ನೆಗಳನ್ನು ಸಮಾಜಶಾಸ್ತ್ರಜ್ಞರು, ಪ್ರಗತಿಶೀಲರು, ನವ್ಯರು, ಸಮಾಜವಾದಿಗಳು ಎತ್ತುವುದಕ್ಕಿಂತ ಬಹುಮುಂಚಿನ ದಶಕಗಳಲ್ಲೇ ಎತ್ತಿಕೊಂಡಿವೆ. ಹಿಂದೂ ಧರ್ಮದ ಶ್ರೇಷ್ಠ ಪ್ರತಿನಿಧಿಗಳೆಂದು ಬ್ರಾಹ್ಮಣರನ್ನು ಮಾತ್ರ ಒಪ್ಪಬೇಕೆ?
ಈ ಧರ್ಮದ ಸಾಂಕೇತಿಕ ಮತ್ತು ವಿಧ್ಯುಕ್ತ ಆಚರಣೆ, ಪೂಜಾ–ಧ್ಯಾನ ಕ್ರಮಗಳನ್ನು ಉಳಿದ ಜಾತಿಗಳ-ವರು ತಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿಕೊಳ್ಳಲು ಹಕ್ಕಿಲ್ಲವೇ? ಪರಂಪರೆಯ ಯಾವ ಆಯಾಮಗಳನ್ನು ಎಷ್ಟು ನವೀಕರಿಸಬೇಕು ಎಂಬ ಹಕ್ಕು ಎಲ್ಲ ಸಮುದಾಯಗಳಿಗೂ ಇಲ್ಲವೇ? ಮತಾಂತರವನ್ನು ಯಾವಾಗಲೂ ಇನ್ನೊಬ್ಬರು ಹೇರಿದ್ದು ಎಂದು ಮಾತ್ರ ಏಕೆ ಭಾವಿಸಬೇಕು? ಇದರಲ್ಲಿ ಸಮುದಾಯಗಳು ವ್ಯಕ್ತಿಯ ಒಪ್ಪಿಗೆ ಮತ್ತು ಸ್ವೀಕಾರದ ಅಂಶ ಕಿಂಚಿತ್ತಾದರೂ ಇರುತ್ತದಲ್ಲವೇ–ಇಂತಹ ಪ್ರಶ್ನೆಗಳನ್ನು ಎದುರಿಸುವ ಮುನ್ನೋಟವನ್ನು 1930–40ರ ದಶಕಗಳ ಸುಮಾರಿನಲ್ಲಿ ರಚಿತವಾದ ‘ಕಾನೂರು ಹೆಗ್ಗಡಿತಿ’, ‘ಚೋಮನದುಡಿ’ ಮತ್ತು 1960ರ ದಶಕದಲ್ಲಿ ರಚಿತವಾದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ತೋರಿಸಿವೆ. ನಮ್ಮ ಸಮಾಜದ ಈಚಿನ ದಶಕಗಳ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹ ಲೇಖಕರ ವಿನ್ಯಾಸವನ್ನೇ ಇನ್ನೂ ಸೂಕ್ಷ್ಮವಾಗಿ ಗಮನಿಸುವುದರಿಂದ ನಾವು ನಮ್ಮ ಸಮಕಾಲೀನತೆಯ ಸ್ತರಗಳನ್ನು ಹೆಚ್ಚಿನ ವೈವಿಧ್ಯ ಮತ್ತು ಸಂಕೀರ್ಣತೆಯಲ್ಲಿ ಗ್ರಹಿಸಬಹುದೆನಿಸುತ್ತದೆ. ಇತಿಹಾಸದ ಮರುಕಟ್ಟುವಿಕೆಯಷ್ಟೇ ಮುಖ್ಯವಾದದ್ದು, ಸಮಕಾಲೀನತೆಯ ವೈವಿಧ್ಯ ಮತ್ತು ವಿನ್ಯಾಸವನ್ನು ಕೂಡ ಗ್ರಹಿಸುವುದು.
3) ಇಂತಹ ವಿದ್ಯಮಾನಗಳನ್ನು ಗ್ರಹಿಸುವಾಗ ನಮ್ಮ ಚಿಂತನಾ ವಿನ್ಯಾಸವು ವಿಸ್ತಾರವಾದದ್ದಲ್ಲವಾದರೂ ಕೇವಲ ಭಾವುಕ ಇಲ್ಲ ಅಸ್ಮಿತೆಯ ನೆಲೆಗಳಲ್ಲಿ ಮಾತ್ರ ಜರುಗುತ್ತಿದ್ದರೆ ನಾವು ನಮ್ಮ ಕಾಲವು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಿಂದ ವಿಮುಖರಾಗುತ್ತೇವೆ. ಈಗಾಗಲೇ ನಮ್ಮ ಸಮಾಜವು ಈ ಅಪಾಯವನ್ನು ಎದುರಿಸುತ್ತಿದೆ. ಶಿಕ್ಷಣ, ಭೂಸುಧಾರಣೆ, ಆರೋಗ್ಯ ಮತ್ತು ಸಾಮಾಜಿಕ ನೆಮ್ಮದಿ, ಸಂಪತ್ತಿನ ಉತ್ಪಾದನೆ ಮತ್ತು ಹಂಚುವಿಕೆಯ ಶೈಲಿಗಳು – ಇಂತಹ ವಿನ್ಯಾಸದ ಚೌಕಟ್ಟಿನಲ್ಲೇ ಸಂಸ್ಕೃತೀಕರಣದ ಪ್ರಶ್ನೆಗಳನ್ನು ಎದುರಿಸಬೇಕು. ಇಲ್ಲದಿದ್ದರೆ ಸಂಸ್ಕೃತೀಕರಣವು ಮೂಡಿಸುವ ಸಮಸ್ಯೆಗಳಿಗೆ ಉತ್ತರವಾಗಿ ಜಾತಿಗೊಬ್ಬ ಜಗದ್ಗುರುವನ್ನೂ, ಇಲ್ಲ ಜನಪ್ರಿಯ ಶೈಲಿಯ ಧರ್ಮದ ಮಾದರಿಗಳಾದ ಮೇಲುಸ್ತರದ ಧಾರ್ಮಿಕ–ಆಧ್ಯಾತ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತಾ, ನಮ್ಮ ಬದುಕನ್ನು ಆಳವಾಗಿ–ನಿರಂತರವಾಗಿ ಪ್ರಭಾವಿಸುವ ಮುಖ್ಯ ಸಾಮಾಜಿಕ–ಆಧ್ಯಾತ್ಮಿಕ–ಆರ್ಥಿಕ ಪ್ರಶ್ನೆಗಳನ್ನು ಬೇರೆಯವರಿಗೆ ಒಪ್ಪಿಸಿ ಬಿಡುತ್ತೇವೆ. ಈ ಕಾರಣಕ್ಕಾಗಿಯೇ ಇಂದು ನಮಗೆ ಎಲ್ಲ ರಾಜಕೀಯ ಪಕ್ಷಗಳು, ಇವರು ನಡೆಸುವ ಸರ್ಕಾರಗಳು, ಸಾಮಾಜಿಕ ಸಂಘಟನೆಗಳು ಒಂದೇ ರೀತಿಯಲ್ಲಿ ಕಾಣಿಸುತ್ತಿವೆ.
ಷ. ಶೆಟ್ಟರ್ ಅಧ್ಯಯನದ ಫಲಿತಗಳು ಸೂಕ್ಷ್ಮವಾದವು, ಮೌಲಿಕವಾದವು. ಇದರ ಚರ್ಚೆ-ಯನ್ನು ಸಂಶೋಧಕರಿಗೆ, ಸಾಹಿತಿಗಳಿಗೆ, ಇತಿಹಾಸಕಾರರಿಗೆ ಬಿಡೋಣ. ಆ ಚರ್ಚೆಯಿಂದ ಸಿಗುವ ಒಳನೋಟಗಳು ಶಾಸನಗಳು ಪ್ರಸ್ತಾಪಿಸುವ ಕಾಲಕ್ಕಿಂತಲೂ ಹೆಚ್ಚು ಸಂಕೀರ್ಣವಾದ, ವೈವಿಧ್ಯಮಯವಾದ ನಮ್ಮ ಸದ್ಯವನ್ನು ಗ್ರಹಿಸಲು ನಮಗೆಲ್ಲರಿಗೂ ನೆರವಾಗುತ್ತದೆಂದು ಆಶಿಸಬಹುದೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.