ಬೆಂಗಳೂರು: ಸರ ಕೀಳುವಾಗ ಪ್ರತಿರೋಧ ತೋರಿದ ಶಿಕ್ಷಕಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ನಾಗರಿಕರು, ಹಿಗ್ಗಾಮುಗ್ಗಾ ಥಳಿಸಿ ಆತನನ್ನು ವಿಜಯನಗರ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ವಿಜಯನಗರ ನಿವಾಸಿ ನಾಗರತ್ನ (50) ಹಲ್ಲೆಗೆ ಒಳಗಾದವರು. ರಾತ್ರಿ 7.30ರ ಸುಮಾರಿಗೆ ಅವರು ಆದಿಚುಂಚನಗಿರಿ ಮಠದ ಸಮೀಪ ನಡೆದು ಹೋಗುತ್ತಿದ್ದಾಗ ಆರೋಪಿ ಸರಕ್ಕೆ ಕೈ ಹಾಕಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ನಾಗರತ್ನ, ಸರವನ್ನು ಬಿಗಿಯಾಗಿ ಹಿಡಿದುಕೊಂಡು ನೆರವಿಗಾಗಿ ಕೂಗಿಕೊಂಡಿದ್ದಾರೆ.
ಈ ವೇಳೆ ಚಾಕು ತೆಗೆದ ಆರೋಪಿ, ಅವರ ಕೈಗಳ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಸರ ಕಿತ್ತುಕೊಂಡು ಓಡಿದಾಗ ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರತ್ನ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ನನ್ನ ಹೆಸರು ದರ್ಶನ್. ಮೈಸೂರಿನವನು. ಹಣದ ಅಗತ್ಯವಿದ್ದ ಕಾರಣಕ್ಕೆ ಈ ಕೃತ್ಯ ಎಸಗಿದೆ’ ಎಂದು ಆರೋಪಿ ಹೇಳುತ್ತಿದ್ದಾನೆ. ಆದರೆ, ಆ ಹೇಳಿಕೆಗಳನ್ನು ನಂಬಲು ಸಾಧ್ಯವಿಲ್ಲ. ಮೈಸೂರು ಪೊಲೀಸರನ್ನು ಸಂಪರ್ಕಿಸಿ, ಈತನ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.