ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ದೇವರಾಜ್‌ಗೆ ರಾಜ್ಯಪ್ರಶಸ್ತಿ

ಸೆಪ್ಟೆಂಬರ್‌ 5ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
Last Updated 3 ಸೆಪ್ಟೆಂಬರ್ 2015, 11:35 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ದೇವರಾಜ್‌ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

25 ವರ್ಷಗಳಿಂದ ಹೊಸ ಬಗೆಯ ಶಿಕ್ಷಣದ ಕೈಂಕರ್ಯದತ್ತ ಆಸಕ್ತಿ ಹೊಂದಿರುವ ಅವರು ತಾಲ್ಲೂಕಿನ ಕಾಚಹಳ್ಳಿಯವರು. ಆದರೆ 20 ವರ್ಷಗಳಿಂದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿರುವ ಅವರು ‘ಕನ್ನಮಂಗಲ ದೇವರಾಜ್‌’ ಎಂದೇ ಪ್ರಸಿದ್ಧಿ ಗಳಿಸಿದ್ದಾರೆ.

ಎಂ.ದೇವರಾಜ್ ಅವರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಕೆಲಸ ಮಾಡಿದರು. ಕನ್ನಮಂಗಲಕ್ಕೆ ಪತ್ರಿಕೆಗಳು ಬರುವುದಿಲ್ಲ. ಮನೆಗೆ ತರಿಸುವ ‘ಪ್ರಜಾವಾಣಿ’ ಪತ್ರಿಕೆಯನ್ನೇ ಶಾಲೆಗೆ ಒಯ್ದು ಮಕ್ಕಳಿಗೆ ಓದಲು ಕೊಡುತ್ತಾರೆ. ಮುಖಪುಟದ ಮುಖ್ಯಸುದ್ದಿಗಳು ಮಾತ್ರವಲ್ಲದೇ ಅಂಕಣ, ಸುಭಾಷಿತ, ಕರುಣಾಳು ಬಾ ಬೆಳಕೆ,  ಸಾಪ್ತಾಹಿಕ ಪುರವಣಿಯಲ್ಲಿನ ಮಕ್ಕಳ ಪುಟ, ಕರ್ನಾಟಕ ದರ್ಶನ, ಕ್ರೀಡೆ, ಶಿಕ್ಷಣ ಪುರವಣಿಯ ಲೇಖನಗಳನ್ನೆಲ್ಲ ಕತ್ತರಿಸಿ ಪುಸ್ತಕ ರೂಪದಲ್ಲಿ ತಯಾರಿಸಿದ್ದಾರೆ. ಹೊರಗಿನ ಜಗತ್ತಿಗೆ ಮಕ್ಕಳು ತೆರೆದುಕೊಳ್ಳುವ ದಾರಿಯಂತೆ ಪತ್ರಿಕೆಯ ಲೇಖನಗಳನ್ನು ಬಳಸಿಕೊಂಡಿರುವರು. ಈ ಸಂಗ್ರಹವನ್ನು ಹಲವೆಡೆ ಪ್ರದರ್ಶನ ಕೂಡ ಮಾಡಿದ್ದಾರೆ.

ಮಕ್ಕಳಿಗೆ ಸ್ವರಚಿತ ನಾಟಕಗಳನ್ನು ಕಲಿಸಿ, ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಲಿಕೆಗೆ ಪೂರಕವಾದ ಹಲವಾರು ಕಲಿಕೋಪಕರಣಗಳನ್ನು ತಯಾರಿಸಿದ್ದಾರೆ. ಶಾಲೆ ಮತ್ತು ಇಲಾಖೆಯ ವತಿಯಿಂದ ವಿವಿಧ ಸಭೆ-ಸಮಾರಂಭಗಳಿಗೆ ವಿಶೇಷ ರೀತಿಯಲ್ಲಿ ವೇದಿಕೆ ಹಾಗೂ ಉದ್ಘಾಟನಾ ಜ್ಯೋತಿ ಸಿದ್ಧಗೊಳಿಸುತ್ತಾರೆ. ಅವರಿಗೆ 2001–02 ನೇ ಸಾಲಿನಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ. 2003–2004ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಲಾಗಿದೆ.

ಕನ್ನಮಂಗಲ ಸರ್ಕಾರಿ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣಗೊಂಡಾದ ನಂತರ ಇಲಾಖೆ ಮತ್ತು ವಿವಿಧ ಮೂಲಗಳಿಂದ 2 ಸಾವಿರಕ್ಕೂ ಮೇಲ್ಪಟ್ಟ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ, ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದ್ದಾರೆ. ಇದರಿಂದ ಪ್ರಭಾವಿತರಾದ ಅನೇಕ ಮಕ್ಕಳು ತಾವೇ ಲೇಖನಗಳನ್ನು ಬರೆಯುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ.

ಲೇಖನಗಳನ್ನು ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಆ ಪುಸ್ತಕಕ್ಕೆ ‘ಕಲರವ’ ಎಂದು ಹೆಸರಿಟ್ಟು, ಆ ಪುಸ್ತಕವನ್ನು ಕೋಲಾರದ ಆದಿಮ ಕೇಂದ್ರದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಸಾಹಿತಿಗಳಾದ ಸ.ರಘುನಾಥ್ ರವರು ಲೋಕಾರ್ಪಣೆ ಮಾಡಿ ಶಾಲೆಯ ಸಾಧನೆಯನ್ನು ಮೆಚ್ಚಿದ್ದಾರೆ. ಪ್ರವಾಸ, ಹೊರಸಂಚಾರಗಳ ಮೂಲಕ ಪರಿಸರದ ಅಗಾಧತೆಯನ್ನು ಪರಿಚಯ ಮಾಡಿಸುವ ಜತೆಗೆ, ಪರಿಸರದ ಬಗ್ಗೆ ಮಕ್ಕಳಲ್ಲಿ ಪ್ರೀತಿಯನ್ನು ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಬೀಜ ನೆಡುವ ಕಾರ್ಯಕ್ರಮದಂತಹ ಅತಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಶಿಕ್ಷಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಊರಿನ ಯುವಕರೆಲ್ಲ ಸೇರಿಕೊಂಡು ಕಟ್ಟಿರುವ ಸ್ನೇಹ ಯುವಕರ ಸಂಘ ಸಹಾಯ ಮಾಡಿತು.
–ಎಂ.ದೇವರಾಜ್‌,
ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT