ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ₨1.10 ಕೋಟಿ ವಂಚಿಸಿದ ಆರೋಪದ ಮೇಲೆ ಬೆಂಗಳೂರು ಉತ್ತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಅಧೀಕ್ಷಕ ಆರ್.ಕೆ. ರಾಮಕೃಷ್ಣ ಅವರನ್ನು ಇಲಾಖೆ ಆಯುಕ್ತ ಮೊಹಮ್ಮದ್ ಮೊಹ್ಸೀನ್ ಬುಧವಾರ ಅಮಾನತುಗೊಳಿಸಿದ್ದಾರೆ.
ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ರಾಮಕೃಷ್ಣ ಅವರು 2007–08ರಲ್ಲಿ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರಿನ ವಸಂತ ಬಿ. ದ್ಯಾವಕ್ಕಳವರ್ ಎಂಬುವರು ದೂರು ನೀಡಿದ್ದರು.
ದೂರಿಗೆ ಪೂರಕವಾಗಿ ರಾಮಕೃಷ್ಣ ಅವರು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ನೀಡಿರುವ ಚೆಕ್ಗಳ ಪ್ರತಿ, ಕೆಪಿಎಸ್ಸಿ ಮತ್ತು ಸರ್ಕಾರದ ಸಚಿವಾಲಯದ ವಿವಿಧ ಇಲಾಖೆಗಳಿಂದ ನೇಮಕಾತಿ ಆದೇಶಗಳನ್ನು ಹೊರಡಿಸಿದಂತೆ ಒದಗಿಸಿರುವ ನಕಲಿ ಆದೇಶಗಳ ಪ್ರತಿಗಳನ್ನು ಅವರು ಸಲ್ಲಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ನಂತರ ರಾಮಕೃಷ್ಣ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.