ಮುಂಬೈ (ಪಿಟಿಐ): ಮಹಾರಾಷ್ಟ್ರ ಸರ್ಕಾರದ ಅಂಗ ಪಕ್ಷವನ್ನಾಗಿಸಲು ಶಿವಸೇನಾ ಜತೆಗೆ ನಡೆದ ಮಾತುಕತೆ ವಿಫಲವಾಗಿದೆ ಎಂಬುದನ್ನು ಅಲ್ಲಗಳೆದಿರುವ ಬಿಜೆಪಿ, ಉಭಯ ಪಕ್ಷಗಳ ನಡುವೆ ಮಾತುಕತೆಯಿಂದ ಉತ್ತಮ ನಿರ್ಧಾರ ಹೊರ ಬೀಳಲಿದೆ ಎಂದು ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.
‘ಶಿವಸೇನಾ ಜತೆಗಿನ ಮಾತುಕತೆ ಪ್ರಗತಿಯಲ್ಲಿದೆ. ಉತ್ತಮ ಫಲಿತಾಂಶ ಸಿಗುವ ವಿಶ್ವಾಸವಿದೆ’ ಎಂದು ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಅವರು ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.
ವಿಧಾನಸಭಾ ಚುನಾವಣೆಯ ವೇಳೆ ಮಹಾರಾಷ್ಟ್ರ ಉಸ್ತುವಾರಿಯಾಗಿದ್ದ ರೂಡಿ ಅವರು, ಶಿವಸೇನಾ ಜೊತೆಗಿನ ಸಂಬಂಧದ ಬಗ್ಗೆ ನಿರಾಶೆಯಾಗಿಲ್ಲ ಎಂದಿದ್ದಾರೆ.
‘ಕೇಂದ್ರದಲ್ಲಿ ನಾವು ಪರಸ್ಪರ ಮೈತ್ರಿಕೂಟದಲ್ಲಿದ್ದೇವೆ. ರಾಜ್ಯದಲ್ಲಿ ಕೆಲವು ಸಮಸ್ಯೆಗಳಿರುವುದನ್ನು ನಾನು ಒಪ್ಪುತ್ತೇನೆ’ ಎಂದಿರುವ ಅವರು, ‘ಮಹಾರಾಷ್ಟ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವತಂತ್ರ ಅಭ್ಯರ್ಥಿಗಳೂ ಸೇರಿದಂತೆ ಎಲ್ಲಾ ಪಕ್ಷಗಳ ಸಹಕಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದಿದ್ದಾರೆ.