ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ತನ್ನ ಕಳಂಕಿತ ನಾಯಕರಿಗೆ ರಕ್ಷಣೆ ಸಿಗಲಿ ಎಂಬ ಒಂದೇ ಕಾರಣಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲು ಮುಂದಾಗಿದೆ ಎಂದು ಶಿವಸೇನಾ ಆಪಾದಿಸಿದೆ.
ಎನ್ಸಿಪಿ ನಿನ್ನೆ ಮೊನ್ನೆಯವರೆಗೂ ಬಿಜೆಪಿಯನ್ನು ಕೋಮುವಾದಿ, ಚಡ್ಡಿ ಪಕ್ಷ ಎಂದೆಲ್ಲಾ ಗೇಲಿ ಮಾಡಿತ್ತು. ಹಿಂದುತ್ವವನ್ನು ಅಣಕವಾಡಿತ್ತು. ಈಗ ಸ್ಥಿರತೆಯ ಹೆಸರಿನಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಆ ಪಕ್ಷ ಹೇಳುತ್ತಿದೆ. ಆದರೆ ನಿಜವಾಗಿಯೂ ಆ ಪಕ್ಷ ರಾಜ್ಯದ ಹಿತದೃಷ್ಟಿಯಿಂದ ಹೀಗೆ ಹೇಳುತ್ತಿಲ್ಲ. ತನ್ನ ಶಾಸಕರ ಅಕ್ರಮಗಳು ಬಯಲಿಗೆ ಬರಬಾರದು ಎಂದೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸೇನಾದ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
ಎನ್ಸಿಪಿ ಪಕ್ಷಕ್ಕೆ ಪ್ರತಿಪಕ್ಷದ ನಾಯಕತ್ವವನ್ನು ಹೊಂದುವ ಅರ್ಹತೆಯೂ ಇಲ್ಲ. ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಎನ್ಸಿಪಿಯನ್ನು ‘ನ್ಯಾಚುರಲಿ ಕರಪ್ಟ್ ಪಾರ್ಟಿ (ಹುಟ್ಟಾ ಭ್ರಷ್ಟಾಚಾರದ ಪಕ್ಷ) ಎಂದು ಟೀಕಿಸಿದ್ದರು ಎಂಬುದನ್ನು ಪ್ರಸ್ತಾಪಿಸಿ ಚುಚ್ಚಲಾಗಿದೆ. ವಿದರ್ಭಾದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದನ್ನು ಜನರು ಮಹಾರಾಷ್ಟ್ರ ರಾಜ್ಯ ವಿಭಜನೆ ಪ್ರಸ್ತಾವವನ್ನು ಬೆಂಬಲಿಸಿದ್ದಾರೆ ಎಂದು ಅರ್ಥೈಸಬಾರದು ಎಂದೂ ಶಿವಸೇನಾ ಎಚ್ಚರಿಕೆ ನೀಡಿದೆ.