ನವದೆಹಲಿ (ಐಎಎನ್ಎಸ್): ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಮಹತ್ವದ ಹಣಕಾಸು, ರಕ್ಷಣೆ ಹಾಗೂ ಕಾರ್ಪೋರೇಟ್ ವ್ಯವಹಾರ ಖಾತೆಗಳನ್ನು ಪಡೆದಿರುವ ಅರುಣ್ ಜೇಟ್ಲಿ ಅವರು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳ ಬಗ್ಗೆ ಮಂಗಳವಾರ ಸುಳಿವು ನೀಡಿದರು.
ಇಲ್ಲಿನ ನಾರ್ತ್ ಬ್ಲಾಕ್ ನಲ್ಲಿ ಹಣಕಾಸು ಸಚಿವರಾಗಿ ಹೊಣೆ ವಹಿಸಿಕೊಂಡ ಜೇಟ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ರಕ್ಷಣಾ ಖಾತೆಯನ್ನು ತಾನು ಹೆಚ್ಚುವರಿ ಖಾತೆಯಾಗಿ ಮಾತ್ರ ವಹಿಸಿಕೊಂಡಿದ್ದು, ಸಂಪುಟ ವಿಸ್ತರಣೆಯಾದ ಬಳಿಕ ಅದು ಹೊಸ ವ್ಯಕ್ತಿಗೆ ಹೋಗಲಿದೆ ಎಂದು ಹೇಳಿದರು.
'ಬದಲಾವಣೆಯ ಹಂತದಲ್ಲಿ ನಾನು ರಕ್ಷಣಾ ಖಾತೆಯ ಹೊಣೆಯನ್ನೂ ನೋಡಿ ಕೊಳ್ಳುತ್ತಿದ್ದೇನೆ. ಆದರೆ ಅದು ಸಂಪುಟ ವಿಸ್ತರಣೆಯಾಗುವವರೆಗಿನ ಹೆಚ್ಚುವರಿ ಹೊಣೆಗಾರಿಕೆ ಮಾತ್ರ' ಎಂದು ಅವರು ನುಡಿದರು.
ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿ ಎ) ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಜೇಟ್ಲಿ ಅವರು ಅತ್ಯಂತ ಮಹತ್ವದ ವ್ಯಕ್ತಿಯಾಗಿದ್ದಾರೆ.