ಐಪಿಎಲ್ನ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮುದ್ಗಲ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಐಸಿಸಿ ಅಧ್ಯಕ್ಷ ಶ್ರೀನಿವಾಸನ್ ನಿರ್ದೋಷಿ ಎಂದಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಅವರ ಮೂಗಿನ ಅಡಿಯಲ್ಲೇ ಐಪಿಎಲ್ ಚಟುವಟಿಕೆಗಳು ನಡೆದಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರು ಹಗರಣದಲ್ಲಿ ಪಾಲ್ಗೊಂಡಿದ್ದರು ಎನ್ನುವುದಕ್ಕೆ ಸಾಕ್ಷ್ಯಗಳಿವೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಶ್ರೀನಿವಾಸನ್ ಅವರಿಗೇ ಸೇರಿದ್ದು. ಮೇಯಪ್ಪನ್ ಆವರು ಶ್ರೀನಿವಾಸನ್ ಅಳಿಯ. ಪ್ರಸಕ್ತ ಹಗರಣದಲ್ಲಿ ಶ್ರೀನಿವಾಸನ್ ಪಾತ್ರದ ಬಗ್ಗೆ ಸಾಕ್ಷ್ಯಾಧಾರಗಳು ಇರಲಿಕ್ಕಿಲ್ಲ, ನಿಜ. ಆದರೆ ಅವರ ಅಧಿಕಾರಾವಧಿಯಲ್ಲಿಯೇ ಅವರ ಸುತ್ತಲೂ ಬೆಳೆದ ಹಗರಣದ ಹುತ್ತದ ಬಗ್ಗೆ ಅವರು ಕಣ್ಣು ಮುಚ್ಚಿ ಕುಳಿತಿದ್ದಂತೂ ಸರಿಯಲ್ಲ.
ಬಿಸಿಸಿಐನಂತಹ ಅತ್ಯಂತ ಪ್ರಮುಖ ಕ್ರೀಡಾಸಂಸ್ಥೆಯ ಆಡಳಿತಗಾರರಾಗಿ ಹಿಂದೆ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದರು ಎಂದು ಮುದ್ಗಲ್ ಸಮಿತಿಯ ವರದಿಯಲ್ಲಿಯೂ ಹೇಳಲಾಗಿದೆ. ಬಿಸಿಸಿಐ ಒಂದು ಸಾರ್ವಜನಿಕ ಸಂಸ್ಥೆ. ಅದರೊಳಗೆ ಏನು ನಡೆದಿದೆ ಎನ್ನುವುದು ಜನರಿಗೂ ಗೊತ್ತಾಗಬೇಕು. ಆದರೆ ಪ್ರಸಕ್ತ ಬಿಸಿಸಿಐ ಆ ಮಟ್ಟಿಗಿನ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ ಎನ್ನುವುದೂ ನಿಜ. ಹೀಗಾಗಿಯೇ ಈ ಸಂಸ್ಥೆ ಹತ್ತು ಹಲವು ಹಗರಣಗಳ ಕೂಪವಾಗಿದೆ.
ಮುದ್ಗಲ್ ವರದಿಯಲ್ಲಿ ಕಳಂಕಿತ ಎಂದು ಪರಿಗಣಿಸಿರುವ ಐಪಿಎಲ್ ಆಡಳಿತಾಧಿಕಾರಿ ಸುಂದರರಾಮನ್ ಅವರನ್ನು ಬಿಸಿಸಿಐ ಈಚೆಗೆ ಸಮರ್ಥಿಸಿಕೊಂಡಿದೆ. ಈ ಮೂಲಕ ಸುಪ್ರೀಂಕೋರ್ಟ್ ನೇಮಿಸಿದ ಮುದ್ಗಲ್ ಸಮಿತಿಯ ವರದಿಯ ಸತ್ಯಾಸತ್ಯತೆಯನ್ನೇ ಅದು ಪ್ರಶ್ನಿಸಿದಂತಾಗಿದೆ. ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ‘ಶ್ರೀನಿವಾಸನ್ ಮೌನ’ವನ್ನು ಪ್ರಶ್ನಿಸಿದ್ದಾರೆ. ಇಂತಹ ಗೊಂದಲಮಯ ವಾತಾವರಣದಲ್ಲಿಯೇ ಶ್ರೀನಿವಾಸನ್ ಮತ್ತೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಏರಲು ಪ್ರಯತ್ನಗಳನ್ನು ನಡೆಸಿದ್ದಾರೆ.
ಚುನಾವಣೆಗೂ ಸಿದ್ಧತೆಗಳು ನಡೆದಿವೆ. ಈ ಸಂದಿಗ್ಧ ಸಂದರ್ಭದಲ್ಲಿ ಕ್ರೀಡಾ ಸಂಸ್ಥೆಗಳ ನೈತಿಕ ಜವಾಬ್ದಾರಿ ಏನು ಎಂಬ ಕುರಿತು ಮರುಚಿಂತನೆ ನಡೆಯಬೇಕಿದೆ. ಜತೆಗೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಡಳಿತ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ಆಡಳಿತ ಪಾರದರ್ಶಕ ತಳಹದಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯೊಳಗೆ ಬಿಸಿಸಿಐಯನ್ನು ತರುವ ಮೂಲಕ ಈ ಸಂಸ್ಥೆಯೊಳಗಿನ ಅವ್ಯವಹಾರಗಳನ್ನು ಕನಿಷ್ಠ ಮಟ್ಟಿಗಾದರೂ ತಡೆಯಲು ಸಾಧ್ಯವಾಗಬಹುದು.
ಕ್ರಿಕೆಟ್ ಈ ನೆಲದ ಜನಪ್ರಿಯ ಕ್ರೀಡೆ. ಕೋಟ್ಯಂತರ ಯುವಜನರಿಗೆ ನಮ್ಮ ಕ್ರಿಕೆಟ್ ತಾರೆಗಳೇ ಮಾದರಿ. ಇಂತಹ ತಾರೆಗಳು, ಕ್ರಿಕೆಟ್ ಸಂಸ್ಥೆ ಕಳಂಕಿತ ಎನಿಸಿಕೊಂಡರೆ ಅದು ಯುವಜನರ ಮನಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವಂತಹದ್ದು. ಈ ನಿಟ್ಟಿನಲ್ಲಿ ದೇಶದ ಕ್ರಿಕೆಟ್ ಆಡಳಿತದ ಶುದ್ಧೀಕರಣ ಪ್ರಕ್ರಿಯೆಗೆ ಚಾಲನೆ ಸಿಗಬೇಕಿದೆ. ಬಿಸಿಸಿಐನ ಪ್ರತಿಯೊಬ್ಬ ಸದಸ್ಯನೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಈ ಮೂಲಕ ದೇಶದಲ್ಲಿ ಕ್ರಿಕೆಟ್ ಇನ್ನಷ್ಟೂ ಜನಜನಿತಗೊಳ್ಳಲು ಸಾಧ್ಯವಿದೆ. ಈ ದಿಸೆಯಲ್ಲಿ ಕ್ರಿಕೆಟ್ ಆಡಳಿತಗಾರರು ಹೊಸ ಹೆಜ್ಜೆ ಇಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.