ಬೆಂಗಳೂರು: ‘ಶೋಷಿತ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಜಾರಿ ದಿನಾಚರಣೆ ಅಂಗವಾಗಿ ಪ್ರಜಾವಿಮೋಚನಾ ಚಳವಳಿ ಸಮತಾವಾದ ಬೆಂಗಳೂರು ನಗರದ ಘಟಕದ ವತಿಯಿಂದ ನಗರದ ಎನ್ಜಿಒ ಸಭಾಂಗಣದಲ್ಲಿ ಸೋಮವಾರ ನಡೆದ ‘ರಾಜ್ಯಾಧಿಕಾರದಲ್ಲಿ ಶೋಷಿತರ ಪಾತ್ರ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಚುನಾವಣೆ ಇಂದು ಪಾರದರ್ಶಕವಾಗಿಲ್ಲ, ದುಬಾರಿಯಾಗಿದೆ. ಚುನಾವಣೆಯ ಲಾಭವನ್ನು ಶ್ರೀಮಂತರು ಮಾತ್ರ ಪಡೆಯುತ್ತಿದ್ದಾರೆ. ಇಡೀ ಜೀವನವನ್ನೇ ಸಮಾಜಕ್ಕಾಗಿ ಮುಡಿಪಾಗಿ ಇಟ್ಟವರು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲೂ ಗೆಲ್ಲುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮಡೆಸ್ನಾನದಂತಹ ಆಚರಣೆಗಳನ್ನು ನಿಷೇಧಿಸಬೇಕು. ದೇವದಾಸಿ ಪದ್ಧತಿ ಹಾಗೂ ಬೆತ್ತಲೆಸೇವೆಯನ್ನು ಸರ್ಕಾರ ನಿಷೇಧಿಸಿದೆ. ಆದರೂ ಇಂತಹ ಆಚರಣೆಗಳು ನಡೆಯುತ್ತಿವೆ. ಕಂದಾಚಾರಗಳ ವಿರುದ್ಧ ದಲಿತರು ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ‘ಮೀಸಲಾತಿ೧ಯಿಂದ ಉನ್ನತ ಹುದ್ದೆಗಳನ್ನು ಪಡೆದಿರುವ ಅಧಿಕಾರಿಗಳು, ವೈದ್ಯರು ಸೇರಿದಂತೆ ಎಲ್ಲರೂ ಬಳಿಕ ನವಬ್ರಾಹ್ಮಣರಾಗಿ ಬಿಡುತ್ತಾರೆ. ಅವರು ಸಮುದಾಯವನ್ನು ಮರೆತು ಬಿಡುತ್ತಾರೆ. ಇಂತಹ ಧೋರಣೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಮಾರಕ’ ಎಂದರು.
ಹಿಂದುಳಿದವರು ಸಮುದಾಯದೊಳಗಿನ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂವಿಧಾನ ವಿರೋಧಿಸುವ ಗುಂಪುಗಳು ಒಗ್ಗಟ್ಟಾಗಿವೆ. ಆದರೆ, ಸಂವಿಧಾನದ ಪರವಾಗಿ ನಿಂತಿರುವ ಗುಂಪುಗಳಲ್ಲಿ ಒಗ್ಗಟ್ಟು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಿಮೋಚನಾ ಚಳವಳಿ ಸಮತಾವಾದದ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, ಎಸಿಪಿ ಸಿದ್ಧರಾಜು ಮತ್ತಿತರರು ಇದ್ದರು.