ಬಾಗೇಪಲ್ಲಿ: ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಅನೇಕ ಫಲಾನುಭವಿಗಳು ಶೌಚಾಲಯ ನಿರ್ಮಿಸಿ ಹಲವು ವರ್ಷ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಸದಸ್ಯರಾದ ಗೋಪಾಲಕೃಷ್ಣ, ಲಕ್ಷ್ಮಿನರಸಿಂಹಪ್ಪ ಆರೋಪಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಅನೇಕ ಹಳ್ಳಿಗಳಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲ. ಇದೇ ಕಾರಣಕ್ಕೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.
ಬಹುತೇಕ ಹಳ್ಳಿಗಳಲ್ಲಿ ಬಯಲು ಶೌಚದಿಂದ ಮುಕ್ತಿ ಪಡೆದಿಲ್ಲ. ಈ ಕಾರಣಕ್ಕೆ ಹೆಣ್ಣುಮಕ್ಕಳ ರಕ್ಷಣೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.
ಹಣ ಬಿಡುಗಡೆ ಆಗಿಲ್ಲ: ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಈ ಹಿಂದೆ ಶೌಚಾಲಯ ನಿರ್ಮಾಣ ಪ್ರೋತ್ಸಾಹಧನ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ.
ಹಾಗಾಗಿ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಶೌಚಾಲಯ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಕೂಡಲೆ ಹಣ ನೀಡುವಂತೆ ಪಿಡಿಒಗಳಿಗೆ ತಿಳಿಸುತ್ತೇನೆ ಎಂದರು. ಇದರಿಂದ ಕೆರಳಿದ ತಾ.ಪಂ.ಸದಸ್ಯರಾದ ಶೋಭಾರಾಣಿ, ಮುನಿರತ್ನಮ್ಮ, ಜಯಸಿಂಹರೆಡ್ಡಿ, ಸಭೆಗಳಿಗೆ ಬರುವಂತೆ ಪಿಡಿಒಗಳಿಗೆ ಹಲವು ಬಾರಿ ಆಹ್ವಾನಿಸಿದ್ದರೂ ಬರುತ್ತಿಲ್ಲ ಎಂದರು.
ಹಾಜರಿ ಕಡ್ಡಾಯ: ಮುಂದಿನ ಸಭೆಗಳಿಗೆ ಕಡ್ಡಾಯವಾಗಿ ಎಲ್ಲ ಪಿಡಿಒ ಹಾಜರಿರುವಂತೆ ಸೂಚಿಸಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಹೇಳಿದರು.
ತಾಲ್ಲೂಕಿನ ಹಲವೆಡೆ ಚಿಕೂನ್ಗುನ್ಯಾ, ಡೆಂಗಿ, ಮಲೇರಿಯಾ ಮತ್ತಿತರ ಕಾಯಿಲೆಗಳು ಜಾಸ್ತಿ ಆಗಿವೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಅವರು ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಜರುಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಪ್ರತಿಸಭೆಗೂ ನನ್ನನ್ನು ಮಾತ್ರ ಕರೆಸುತ್ತಿದ್ದಾರೆ. ಇಲಾಖಾಧಿಕಾರಿಗಳು ಇದ್ದಾರೆ, ಅವರನ್ನು ಸಹ ಸಭೆಗೆ ಕರೆಸಿ ಕೇಳಿ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ನಾಯಕ್, ಸದಸ್ಯರಾದ ಗೌರಮ್ಮ, ನಾರಾಯಣಪ್ಪ, ವೈ.ವೆಂಕಟರಮಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆದಿಲಕ್ಷ್ಮಮ್ಮ, ತಾಂತ್ರಿಕ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣ, ಉಪಖಜಾನಾಧಿಕಾರಿ ತೊಳಸಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರಫೀಕ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗುಲಮ್ಮ, ಶಂಕರ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.