ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಮತ್ತು ಕೆ.ಶ್ರೀಕಾಂತ್ ಪಾಲಿಗೆ ಭಾನುವಾರ ಶುಭ ದಿನ. ಇವರಿಬ್ಬರು ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ನೂತನ ಮೈಲಿಗಲ್ಲು ನೆಟ್ಟರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಸೈನಾ, ಥಾಯ್ಲೆಂಡ್ನ ರಚಾನೊಕ್ ಇಂಟಾನೊನ್ ವಿರುದ್ಧ ಗೆದ್ದರು.
ಶ್ರೀಕಾಂತ್ ಪುರುಷರ ವಿಭಾಗದ ಫೈನಲ್ನಲ್ಲಿ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ಅವರನ್ನು ಪರಾಭವಗೊಳಿಸಿದರು. ಇವರು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಇದೇ ಮೊದಲು.
ಇವರಿಬ್ಬರು ಈ ವರ್ಷ ಗೆದ್ದ ಎರಡನೇ ಪ್ರಶಸ್ತಿ ಇದಾಗಿದೆ. ಜನವರಿಯಲ್ಲಿ ನಡೆದಿದ್ದ ಇಂಡಿಯಾ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಸೈನಾ ಪ್ರಶಸ್ತಿ ಜಯಿಸಿದ್ದರು.
22 ವರ್ಷದ ಶ್ರೀಕಾಂತ್ ಈ ತಿಂಗಳ ಆರಂಭದಲ್ಲಿ ಜರುಗಿದ್ದ ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿ ಯಲ್ಲಿ ಚಾಂಪಿಯನ್ ಆಗಿದ್ದರು.
ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ನಾನು ಕಹಿ ಅನುಭವಿಸಿದ್ದೇ ಹೆಚ್ಚು. ಈ ಬಾರಿ ಆ ನಿರಾಸೆಯಿಂದ ಹೊರಬಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ
-ಸೈನಾ ನೆಹ್ವಾಲ್, ಪ್ರಶಸ್ತಿ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ
ಇಲ್ಲಿ ಸಿಕ್ಕ ಪ್ರಶಸ್ತಿ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ. ಮುಂದಿನ ಟೂರ್ನಿಗಳಲ್ಲಿ ಆತ್ಮ ವಿಶ್ವಾಸದಿಂದ ಆಡಲು ಸಾಧ್ಯವಾಗುತ್ತದೆ.
ಕೆ.ಶ್ರೀಕಾಂತ್, ಪ್ರಶಸ್ತಿ ಗೆದ್ದ ಬ್ಯಾಡ್ಮಿಂಟನ್ ಆಟಗಾರ