ಬೆಂಗಳೂರು: ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಂಸದ ಬಿ.ಶ್ರೀರಾಮುಲು ಅವರಿಗೆ ನಗರದ 13ನೇ ಎಸಿಎಂಎಂ ನ್ಯಾಯಾಲಯ ಬುಧವಾರ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಶ್ರೀರಾಮುಲು ಗೈರಾಗಿದ್ದರು. ಅವರ ಈ ವರ್ತನೆಗೆ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿದರು.
ಬಿಎಸ್ಆರ್ ಪಕ್ಷದ ಸಂಸ್ಥಾಪಕರಾಗಿದ್ದ ವೇಳೆ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಕೊಡುವುದಾಗಿ ಹೇಳಿ ತನ್ನಿಂದ ₨ 2.94 ಕೋಟಿ ಪಡೆದಿದ್ದರು. ಬಳಿಕ ಟಿಕೆಟ್ ನೀಡದ ಅವರು, ಹಣಕ್ಕೆ ಪ್ರತಿಯಾಗಿ ಚೆಕ್ ಕೊಟ್ಟಿದ್ದರು. ಆದರೆ, ಅವರ ಖಾತೆಯಲ್ಲಿ ಹಣವಿರದ ಕಾರಣ ಚೆಕ್ ಬೌನ್ಸ್ ಆಗಿತ್ತು ಎಂದು ಆರೋಪಿಸಿ ಮೈಸೂರಿನ ಸೋಮಶೇಖರ್ ಎಂಬುವರು ದೂರು ಕೊಟ್ಟಿದ್ದರು.