ಬೆಂಗಳೂರು: ‘ಬಿಬಿಎಂಪಿಯ ಕಳೆದ ಐದು ವರ್ಷದ ಆದಾಯ ಮತ್ತು ವೆಚ್ಚದ ಬಗ್ಗೆ ಆಡಳಿತಾಧಿಕಾರಿಯವರು ಕೂಡಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಒತ್ತಾಯಿಸಿದರು.
‘ಬೆಂಗಳೂರು ಅಭಿವೃದ್ಧಿ ಸಮಿತಿ’ ಮಹಾನಗರಪಾಲಿಕೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನದಲ್ಲಿ ಅವರು ಮಾತ ನಾಡಿದರು.
‘ಪಾಲಿಕೆಯ ಆಡಳಿತ ಹದಗೆಟ್ಟು ಹೋಗಿದೆ. ಹಗರಣಗಳು ಮಾತ್ರ ಕೇಳಿ ಬರುತ್ತಿವೆ. ಹಾಗಾಗಿ ತೆರಿಗೆ ಪಾವತಿಸುವ ಪ್ರತಿಯೊಬ್ಬರಿಗೂ ಅಲ್ಲಿನ ವಹಿವಾಟಿನ ಬಗ್ಗೆ ಗುಮಾನಿ ಹುಟ್ಟುತ್ತಿದೆ’ ಎಂದು ದೊರೆಸ್ವಾಮಿ ಹೇಳಿದರು.
‘ಈ ಅನುಮಾನ ನಿವಾರಿಸಲು ಕೂಡಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಆಗ್ರಹಿಸಿದರು. ಸಮಿತಿ ಅಧ್ಯಕ್ಷ ಮುಳ್ಳಹಳ್ಳಿ ಸೂರಿ ಅವರು ಮಾತನಾಡಿ, ‘ಬಿಬಿಎಂಪಿಯಲ್ಲಿ 2010–11ನೇ ಸಾಲಿನಲ್ಲಿ ನಡೆದ ₨1,539 ಕೋಟಿ ಕಳಪೆ ಕಾಮಗಾರಿಯ ಹಗರಣ ವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕ ಲಾಗಿದೆ’ ಎಂದು ಆರೋಪಿಸಿದರು.
‘ಹಗರಣದ ತನಿಖೆಯನ್ನು ಆರಂಭದಲ್ಲಿ ಬಿಎಂಟಿಎಫ್ಗೆ ವಹಿಸಲಾಗಿತ್ತಲ್ಲದೆ, ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ನನ್ನು ಬಂಧಿಸಲಾಗಿತ್ತು. ಇದಾದ ಕೆಲವೇ ದಿನಗಳ ಬಳಿಕ ಹಗರಣಕ್ಕೆ ಸಂಬಂಧಿಸಿದ ಕೆಲವು ಕಡತಗಳಿದ್ದ ಕೋಣೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಯಿತು. ನಂತರ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸ ಲಾಯಿತು’ ಎಂದರು.
‘ಅಂತಿಮ ವರದಿ ನೀಡಿದರೂ, ನಿಜವಾದ ಆರೋಪಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.