ಮುಂಬೈ(ಪಿಟಿಐ): ಕಳೆದ ಮೂರು ದಿನಗಳಿಂದ ಇಳಿ ಮುಖ ಹಾದಿಯಲ್ಲಿದ್ದು ಒಟ್ಟು 438 ಅಂಶಗಳ ಹಾನಿ ಅನುಭವಿಸಿದ್ದ ಮುಂಬೈ ಷೇರುಪೇಟೆ, ಗುರುವಾರ ದಿಢೀರ್ ಎಂದು ಮೇಲಕ್ಕೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಎಚ್ಸಿಎಲ್ ಟೆಕ್ನಾಲಜೀಸ್ ಕಂಪೆನಿಗಳು ಬುಧವಾರ ಸಂಜೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಲಾಭ ಮತ್ತು ವರಮಾನ ಹೆಚ್ಚಳ ನಿರೀಕ್ಷೆಗೂ ಮೀರಿ ಉತ್ತಮ ವಾಗಿತ್ತು. ಇದು ಗುರುವಾರ ಷೇರುಪೇಟೆಯಲ್ಲಿ ಭಾರಿ ಉತ್ತೇಜನ ಮೂಡಿಸಿತು. ಹೂಡಿಕೆದಾರರ ಖರೀದಿ ವಹಿವಾಟು ಹೆಚ್ಚಿಸಿತು.
ಇನ್ನೊಂದೆಡೆ, ‘ಲೋಕಸಭೆ ಚುನಾವಣೆ ನಂತರ ಅಧಿಕಾರಕ್ಕೇರುವ ಸರ್ಕಾರ ದೇಶದ ವಿತ್ತೀಯ ಸಮಸ್ಯೆ ಮತ್ತು ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿ ಸುವ ನಿರೀಕ್ಷೆ ಇದೆ. ಇದು ಭಾರತಕ್ಕೆ ಆರ್ಥಿಕ ಪ್ರಗತಿ ಯನ್ನು ತಂದುಕೊಡುವ ಸಾಧ್ಯತೆ ಇದೆ’ ಎಂದು ಸ್ಟಾಂಡರ್ಡ್ ಅಂಡ್ ಪೂರ್ (ಎಸ್ ಅಂಡ್ ಪಿ) ವರದಿ ನೀಡಿದೆ.
ಈ ಎರಡೂ ಅಂಶಗಳು ಷೇರುಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದರಿಂದ ಗುರುವಾರದ ವಹಿವಾಟು ಚುರುಕಾಯಿತು. ಬಿಎಸ್ಇ ಸಂವೇದಿ ಸೂಚ್ಯಂಕ 351 ಅಂಶಗಳಷ್ಟು ಉತ್ತಮ ಏರಿಕೆ ದಾಖಲಿ ಸಿತು. 22,628.84 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ‘ನಿಫ್ಟಿ’ ಸಹ 104.10 ಅಂಶಗಳಷ್ಟು ಭಾರಿ ಏರಿಕೆ ಕಂಡು 6,779.40 ಅಂಶಗಳಲ್ಲಿ ದಿನದಂತ್ಯ ಕಂಡಿತು.