ಷೇರುಪೇಟೆ ವಹಿವಾಟಿನಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಕಟಿಸಿದೆ. ಈ ಕ್ರಮಗಳು ಪೇಟೆಯಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಹಲವಾರು ಅವ್ಯವಹಾರಗಳಿಗೆ ಕಡಿವಾಣ ಹಾಕುವುದರ ಜತೆಗೆ, ಪೇಟೆಯ ವಹಿವಾಟನ್ನು ಇನ್ನಷ್ಟು ಸಶಕ್ತಗೊಳಿಸಲು ನೆರವಾಗಲಿವೆ.
ಒಳ ವ್ಯಾಪಾರ ನಿಯಂತ್ರಣ ಕ್ರಮಗಳಲ್ಲಿ ಮಹತ್ವದ ಬದಲಾವಣೆ ಮತ್ತು ಪೇಟೆಯಲ್ಲಿ ವಹಿವಾಟು ನಡೆಸುವ ಮತ್ತು ವಹಿವಾಟಿನಿಂದ ಹಿಂದೆ ಸರಿಯುವುದರ ನಿಯಮಗಳೂ ಒಳಗೊಂಡಿವೆ. ಪೇಟೆಯಲ್ಲಿ ಈಗಾಗಲೇ ಹಲವಾರು ನಿಯಂತ್ರಣ ಕ್ರಮಗಳು ದಶಕಗಳಿಂದ ಜಾರಿಯಲ್ಲಿದ್ದರೂ, ಹಲವಾರು ಬಗೆಯ ಅವ್ಯವಹಾರ ತಡೆಗಟ್ಟುವಲ್ಲಿ ಅವು ಪರಿಣಾಮಕಾರಿಯಾಗಿ ಬಳಕೆಯಾಗಿಲ್ಲ. ಎರಡು ದಶಕಗಳ ಅವಧಿಯಲ್ಲಿ ದೇಶಿ ಬಂಡವಾಳ ಪೇಟೆ ಗಮನಾರ್ಹವಾಗಿ ಬೆಳೆದಿದೆ. ಒಳವ್ಯಾಪಾರ ನಿಷೇಧವು 1992ರಿಂದಲೇ ಜಾರಿಯಲ್ಲಿದ್ದರೂ, ಈ ಅಕ್ರಮ ಸ್ವರೂಪದ ವಹಿವಾಟು ಎಗ್ಗಿಲ್ಲದೇ ನಡೆಯುತ್ತಲೇ ಬಂದಿದೆ. ಈ ಅಕ್ರಮಕ್ಕೆ ಕಡಿವಾಣ ವಿಧಿಸುವ ಕಠಿಣ ಕ್ರಮಗಳು ಸ್ವಾಗತಾರ್ಹವಾಗಿವೆ. ಸದ್ಯಕ್ಕೆ ಜಾರಿಯಲ್ಲಿ ಇರುವ ನಿಯಂತ್ರಣ ಕ್ರಮಗಳ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ನ್ಯಾ. ಸೋಧಿ ಸಮಿತಿಯ ಬಹುತೇಕ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಸೆಬಿ ದಿಟ್ಟಹೆಜ್ಜೆ ಇರಿಸಿದೆ.
ಹೊಸ ನಿಯಮ ‘ಒಳಗಿನವರು’ ಎನ್ನುವುದರ ಅರ್ಥವ್ಯಾಪ್ತಿಯನ್ನೂ ಹಿಗ್ಗಿಸಿದೆ. ವಹಿವಾಟಿನ ಸಂಪೂರ್ಣ ಸ್ವರೂಪವನ್ನು ಅಧಿಕಾರಿಗಳು ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸಂಸ್ಥೆಯ ಷೇರು ಬೆಲೆಗೆ ಸಂಬಂಧಿಸಿದಂತೆ ಪ್ರಕಟಿಸಲಾಗದ ಸೂಕ್ಷ್ಮ ಮಾಹಿತಿ ಗೊತ್ತಿರುವವರೆಲ್ಲ ‘ಒಳಗಿನವರು’ ಎಂದೂ ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ನಿರ್ದೇಶಕರ ಸಂಬಂಧಿಕರು, ಉದ್ಯೋಗಿಗಳು ಮತ್ತು ಇಂತಹ ಒಳಗುಟ್ಟು ತಿಳಿದುಕೊಂಡಿರುವ ಇತರರು ಕೂಡ ಸೇರಲಿದ್ದಾರೆ. ಆದರೆ, ನೀತಿ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುವ ಅಥವಾ ನಿರ್ವಹಿಸುತ್ತಿರುವ ಹುದ್ದೆಯ ದೆಸೆಯಿಂದಾಗಿಯೇ ಇಂತಹ ಸೂಕ್ಷ್ಮ ಮಾಹಿತಿ ಪಡೆದುಕೊಳ್ಳುವ ಸರ್ಕಾರಿ ನೌಕರರು, ಸಚಿವರು ಮತ್ತು ನ್ಯಾಯಾಧೀಶರು ಹೊಸ ಅರ್ಥ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಈ ಬಗ್ಗೆ ನ್ಯಾ. ಸೋಧಿ ಸಮಿತಿಯ ಶಿಫಾರಸನ್ನು ಸೆಬಿ ಪಾಲಿಸದಿರುವುದು ಅಚ್ಚರಿಯ ವಿಚಾರ. ‘ಒಳಗಿನವರು’, ಷೇರು ವಹಿವಾಟು ನಡೆಸುವಾಗ ಅನುಸರಿಸಬೇಕಾದ ನಿಯಮಗಳನ್ನೂ ಈಗ ಸ್ಪಷ್ಟಪಡಿಸಲಾಗಿದ್ದು, ತಮ್ಮ ವಹಿವಾಟಿನ ಬಗ್ಗೆ ಷೇರುಪೇಟೆಗೆ ಮುಂಚಿತವಾಗಿಯೇ ತಿಳಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಲು ಮುಂದಾಗುವ ಸಂಸ್ಥೆಗಳು ನೀಡುವ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದ ನಿಯಮಗಳನ್ನೂ ಈಗ ಕಠಿಣಗೊಳಿಸಲಾಗಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಘೋಷಿಸುವ ಮುನ್ನ ಸಂಸ್ಥೆಯ ಹಣಕಾಸಿನ ಸ್ವರೂಪದ ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಬಂಧನೆ ಈಗಾಗಲೇ ಜಾರಿಯಲ್ಲಿದ್ದರೂ ಸಂಸ್ಥೆಗಳು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಸಂಸ್ಥೆಯೊಂದರ ನೈಜ ಹಣಕಾಸಿನ ಸ್ವರೂಪದ ವಿವರಗಳು ಹೂಡಿಕೆದಾರರು ಷೇರು ಖರೀದಿ ಅಥವಾ ಮಾರಾಟಕ್ಕೆ ಕೈಗೊಳ್ಳುವ ನಿರ್ಧಾರಕ್ಕೆ ಅಗತ್ಯವಾಗಿ ಬೇಕಾಗಿರುತ್ತದೆ. ಸಂಸ್ಥೆಯೊಂದು ಷೇರು ವಹಿವಾಟಿನಿಂದ ಹಿಂದೆ ಸರಿಯುವ ಕ್ರಮಗಳೂ ಈಗ ಹೆಚ್ಚು ಸ್ಪಷ್ಟವಾಗಿವೆ. ಈ ಎಲ್ಲ ಹೊಸ ಕಠಿಣ ಕ್ರಮಗಳ ಜಾರಿಗೆ ಸೆಬಿ ಮತ್ತು ಷೇರುಪೇಟೆಗಳು ಹೆಚ್ಚು ಕಾಳಜಿ ವಹಿಸಿದರೆ ಮಾತ್ರ ಷೇರುಪೇಟೆ ವಹಿವಾಟು ಇನ್ನಷ್ಟು ಪಾರದರ್ಶಕವಾಗಿ ನಡೆದು ಹೂಡಿಕೆದಾರರ ಹೆಚ್ಚಿನ ವಿಶ್ವಾಸಕ್ಕೂ ಪಾತ್ರವಾದೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.