ಶಿವಮೊಗ್ಗ: ಲೋಕ ಕಲ್ಯಾಣಾರ್ಥವಾಗಿ ಮತ್ತೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೋಮಯಾಗದಲ್ಲಿ ಆಡುಗಳನ್ನು (ಮೇಕೆ) ಬಲಿಕೊಟ್ಟಿರುವ ವಿಚಾರಕ್ಕೆ ಸಂಕೇತಿ ಬ್ರಾಹ್ಮಣ ಸಮುದಾಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಮತ್ತೂರು ಹೊರವಲಯದ ಶ್ರೀಕಂಠಪುರ (ತಮಿಳರ ಕ್ಯಾಂಪ್) ಅಡಿಕೆ ಕಣದಲ್ಲಿ ಏ. 22ರಿಂದ 27ರವರೆಗೆ ನಡೆದ ಯಾಗದಲ್ಲಿ 8 ಆಡುಗಳನ್ನು ಬಲಿಕೊಡಲಾಗಿದೆ. ಈ ಯಾಗಕ್ಕೆ ಸಂಬಂಧಿಸಿದ ಆಡಿಯೊ ಹಾಗೂ ವಿಡಿಯೊ ತುಣುಕುಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
<br/> <br/> ವೇದಗಳ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು, ಇಷ್ಟಾರ್ಥ ಈಡೇರಿಕೆಗಾಗಿ ಯಜ್ಞಕುಂಡಕ್ಕೆ ಪ್ರಾಣಿಗಳನ್ನು ಬಲಿಕೊಟ್ಟು ‘ಪಶುಯಾಗ’ (ಸೋಮಯಾಗ) ಆಚರಿಸಲಾಗುತ್ತಿತ್ತು. ಲೋಕಕಲ್ಯಾಣಕ್ಕಾಗಿ ಹಾಗೂ ತಮ್ಮ ಬಲ ವೃದ್ಧಿಗಾಗಿ ದಶರಥ, ಶ್ರೀರಾಮರೂ ಇಂತಹ ಯಾಗಗಳನ್ನು ನಡೆಸಿದ್ದರ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ.<br/> <br/> ಆದರೆ ಅದ್ವೆತ ಸಿದ್ಧಾಂತವನ್ನು ಅನುಸರಿಸುವ ಕಟ್ಟಾ ಸಂಪ್ರದಾಯಸ್ಥ ಸಂಕೇತಿ ಬ್ರಾಹ್ಮಣ ಸಮುದಾಯದ ಕೆಲವು ಮುಖಂಡರು ಇಂದಿಗೂ ಪ್ರಾಣಿ ಬಲಿಕೊಡುವ ಇಂತಹ ಅನಿಷ್ಟ ಪದ್ಧತಿ ಮುಂದುವರಿಸಿಕೊಂಡು ಬಂದಿರುವುದು ಆ ಸಮುದಾಯದ ಬಹುಪಾಲು ಜನರ ಅಸಮಾಧಾನಕ್ಕೆ ಕಾರಣವಾಗಿದೆ.<br/> <br/> <strong>ಬೆಂದ ಮಾಂಸ, ಮದ್ಯ ಪ್ರಸಾದ: </strong>ಅಗ್ನಿಕುಂಡದ ಬಳಿಯೇ ಆಡು ತಂದು ಪೂಜಿಸಿದ ನಂತರ, ಅದು ಅರಚದಂತೆ ಬಾಯಿ ಬಿಗಿಯಾಗಿ ಕಟ್ಟಿ, ಬಲಿಕೊಡುತ್ತಾರೆ. ನಂತರ ಆಡಿನ ಒಂದೊಂದೆ ಅಂಗ ಬೇರ್ಪಡಿಸಿ, ಅಗ್ನಿಗೆ ಆಹುತಿ ನೀಡಲಾಗುತ್ತದೆ. ಹೋಮ ಕುಂಡದಲ್ಲಿ ಹದವಾಗಿ ಬೆಂದ ಮಾಂಸವನ್ನು ಋತ್ವಿಜರು (ಯಜ್ಞ ನಡೆಸಿಕೊಡುವ ಮುಖ್ಯ ಪುರೋಹಿತರು) ಸೇರಿದಂತೆ ಯಾಗದಲ್ಲಿ ಭಾಗವಹಿಸಿದ್ದ ಭಕ್ತರು ಸೇವಿಸುತ್ತಾರೆ. ಮಾಂಸ ಸೇವನೆಗೂ ಮುನ್ನ ಮೊದಲೇ ಸಂಗ್ರಹಿಸಿಟ್ಟಿದ್ದ ಸೋಮರಸ (ಬಟ್ಟಿ ಇಳಿಸಿದ ಹೆಂಡ) ಕುಡಿಯುತ್ತಾರೆ. ಸೋಮರಸ ಸೇವಿಸುವುದರಿಂದ ಪ್ರಾಣಿ ಬಲಿಯ ಕ್ರೌರ್ಯ ಹಾಗೂ ಅದನ್ನು ಸಹಿಸಿಕೊಳ್ಳಲು ಬೇಕಾದ ನಿರ್ವಿಕಾರ ಭಾವ ಮೂಡುತ್ತದೆ ಎನ್ನುವ ನಂಬಿಕೆ ಯಾಗ ನಡೆಸಿಕೊಡುವ ಪುರೋಹಿತರಲ್ಲಿದೆ.<br/> ಮತ್ತೂರಿನಲ್ಲಿ ನಡೆದ ಈ ಯಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದ 17 ಋತ್ವಿಜರು ಭಾಗವಹಿಸಿ, ಹಗಲು–ರಾತ್ರಿ ಸರದಿಯ ಮೇಲೆ ಈ ಯಾಗ ನಡೆಸಿದ್ದರು. ಕೆಲ ರಾಜಕಾರಣಿಗಳು ತಮ್ಮ ರಾಜಕೀಯ ಬಲ ವೃದ್ಧಿಸಿಕೊಳ್ಳಲು, ಅಧಿಕಾರ ಹಿಡಿಯಲು ಬೇಕಾದ ಶಕ್ತಿ, ಅದೃಷ್ಟ ಹೊಂದಲು, ಭಯ ನಿವಾರಣೆಗಾಗಿ ಬ್ರಾಹ್ಮಣರ ಮೂಲಕ ಸೋಮಯಾಗ ಮಾಡಿಸುತ್ತಾರೆ ಎನ್ನುವ ಪ್ರತೀತಿ ಇದೆ.<br/> <br/> <strong>ಹಿಂದೆಯೂ ಭಾರಿ ವಿರೋಧ ವ್ಯಕ್ತವಾಗಿತ್ತು</strong><br/> ‘ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಅವರಿಗೆ ಅಧಿಕಾರ ತಪ್ಪಿಸುವ ಕಾರಣಕ್ಕಾಗಿ ಮತ್ತೂರಿನಲ್ಲಿ ಸೋಮಯಾಗ ನಡೆಸಿ, ನೂರಾರು ಆಡುಗಳನ್ನು ಬಲಿಕೊಟ್ಟಿದ್ದರು. ಈ ವಿಚಾರವಾಗಿ ಸಂಕೇತಿ ಬ್ರಾಹ್ಮಣರೇ ಆಗಿದ್ದ ಗಮಕಿ ದಿ. ಮತ್ತೂರು ಕೃಷ್ಣಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಯನ್ನೂ ಮಾಡಿದ್ದರು. ಆಗ ಕೆಲವು ವರ್ಷ ಸ್ಥಗಿತಗೊಂಡಿದ್ದ ಇಂತಹ ಮೌಢ್ಯದ ಆಚರಣೆ ಈಗ ಮತ್ತೆ ಗರಿಗೆದರಿದೆ.<br/> <br/> ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಡಾಕ್ಟರೇಟ್ ಪಡೆದ ಡಾ.ಸನತ್ಕುಮಾರ್ ಅವರಂತಹ ಗಮಕ ವಿದ್ವಾಂಸರು, ಇಂತಹ ಯಾಗ ಆಯೋಜಿಸಿದ್ದು ಸಮಾಜದ ಜನರು ತಲೆ ತಗ್ಗಿಸುವ ವಿಚಾರ’ ಎಂದು ಹೆಸರು ಹೇಳಲು ಇಚ್ಛಿಸದ ಸಂಕೇತಿ ಸಮುದಾಯದ ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.<p>‘ಯಾಗಕ್ಕೆ ₹ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಸಮುದಾಯದ ಬಹುಪಾಲು ಬ್ರಾಹ್ಮಣರು ವಿರೋಧ ವ್ಯಕ್ತಪಡಿಸಿದರೂ, ಲೆಕ್ಕಿಸದೆ ಪ್ರಾಣಿ ಬಲಿ ನೀಡಲಾಗಿದೆ’ ಎಂದು ಯಾಗದ ವಿರೋಧಿಗಳು ದೂರುತ್ತಾರೆ.<br/> <br/> ‘ಯಾಗ ನಿಗದಿಯಾದ ನಂತರ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಬಹಿರಂಗವಾಗಿ ವಿರೋಧಿಸಿದರೆ, ಬಹು ಸಂಖ್ಯೆಯ ಸಂಕೇತಿಗಳು ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಮೌನ ಪ್ರತಿಭಟನೆ ದಾಖಲಿಸಿದ್ದಾರೆ.<br/> <br/> ‘ರಾಜ್ಯದ ಮೇಧಾವಿ ವಿದ್ವಾಂಸರಾಗಿದ್ದ ರಂಗನಾಥ ಶರ್ಮ ಅವರು ತಮ್ಮ ಕೃತಿ ‘ಪ್ರಜ್ಞಾರಂಗ’ದಲ್ಲಿ ಪಶುಮೇಧಯಾಗನ್ನು ತೀವ್ರವಾಗಿ ಖಂಡಿಸಿದ್ದಾರೆ. ವೇದವಿದರಲ್ಲೇ ಅಗ್ರಗಣ್ಯರಾಗಿದ್ದ ಲಿಂಗದಹಳ್ಳಿ ನರಸಿಂಹಮೂರ್ತಿ ಅವರು ‘ಸೋಮಯಾಗವು ಅತ್ಯಂತ ಅಮಾನವೀಯ ಎಂದು ಟೀಕಿಸಿದ್ದಾರೆ’ ಎಂದು ಸಮುದಾಯದ ಮುಖಂಡರು ಉಲ್ಲೇಖಿಸುತ್ತಾರೆ.<br/> <br/> ‘ಸೋಮಯಾಗದಲ್ಲಿ ಪ್ರಾಣಿಬಲಿ ಕೊಡಲಾಗಿದೆ ಎಂಬ ಸಂಗತಿ ನಿಜವಾಗಿದ್ದರೆ, ಅದು ಅಮಾನವೀಯ. ಸರ್ವತ್ರ ಖಂಡನೀಯ. ಯಾವ ದೇವರಿಗೂ ಹಿಂಸೆಯ ಆವಶ್ಯಕತೆ ಇರುವುದಿಲ್ಲ. ಧರ್ಮ ಎನ್ನುವುದು ಸಕಲ ಜೀವಿಗಳಲ್ಲಿ ಕರುಣೆ, ಪ್ರೀತಿ ತೋರುವುತ್ತದೆಯೇ ಹೊರತು ಕ್ರೌರ್ಯವನ್ನಲ್ಲ’ ಎನ್ನುತ್ತಾರೆ ಹಿರಿಯ ಸಾಹಿತಿ ಪ್ರೊ.ರಾಮಚಂದ್ರನ್. ರಾಮಚಂದ್ರನ್ ಅವರೂ ಸಂಕೇತಿ ಬ್ರಾಹ್ಮಣರು.<br/> * * *<br/> <br/> ಮತ್ತೂರಿನಲ್ಲಿ ನಡೆದ ಯಾಗ ಹಾಗೂ ಪ್ರಾಣಿ ಬಲಿ ಕುರಿತು ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ನಾನು ವಕ್ತಾರನಲ್ಲ. ಯಜಮಾನನ ಸ್ಥಾನದಲ್ಲಿ ಕುಳಿತಿದ್ದೇನೆ ಅಷ್ಟೆ. ಈ ಕುರಿತು ಚರ್ಚೆ ಅನಗತ್ಯ.<br/> <strong>-ಡಾ.ಸನತ್ಕುಮಾರ್, </strong><br/> ಮತ್ತೂರು ಯಾಗದ ಆಯೋಜಕ</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.